ಬೆಂಗಳೂರಿನಲ್ಲಿ ಉಸಿರುಗಟ್ಟಿಸಿ ಬ್ಯಾಂಕ್ ಮ್ಯಾನೇಜರ್ ಹತ್ಯೆ

ಕೊಲೆ ನಡೆದಿರುವುದು ಬೆಳಕಿಗೆ ಬಂದಿದ್ದು ಭಾನುವಾರ ಸಂಜೆ ಹೊತ್ತಿಗೆ. ಮೃತರನ್ನು ಪಡುಕೋಣೆ ಮೂಲದ ಶಂಕರ್ ಪೂಜಾರಿ (55) ಎಂದು ಗುರುತಿಸಲಾಗಿದ್ದು, ಓರಿಯೆಂಟಲ್ ಬ್ಯಾಂಕ್ ನಲ್ಲಿ ಅವರು ಚೀಫ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ಡೆಪ್ಯುಟಿ ಕಮಿಷನರ್ ಸೋನಿಯಾ ನಾರಂಗ್ ತಿಳಿಸಿದ್ದಾರೆ.
ಯಡಿಯೂರು ಕೆರೆಯ ಬಳಿ ಇರುವ ನಿವಾಸದಲ್ಲಿ ಪೂಜಾರಿಯನ್ನು ಬೆಡ್ ಶೀಟಿನಿಂದ ಉಸಿರುಗಟ್ಟಿಸಿ ಹತ್ಯೆಗೈಯಲಾಗಿದೆ. ಕೊಲೆಯನ್ನು ಪೂಜಾರಿಗೆ ಬಲ್ಲವರೇ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಹೊರಬಾಗಿಲಿಗೆ ಒಳಗಿನಿಂದ ಅಗುಳಿ ಹಾಕಿರಲಿಲ್ಲ ಮತ್ತು ಯಾವುದೇ ವಸ್ತುವೂ ಕಳುವಾಗಿಲ್ಲ.
ಪೂಜಾರಿಗೆ ಸೇರಿದ ಪರ್ಸ್ ಮತ್ತು ಮೊಬೈಲ್ ಅಲ್ಲಲ್ಲೇ ಇವೆ. ಆದರೆ, ಕಪಾಟುಗಳು ತೆರೆದುಕೊಂಡಿದ್ದವು. ಕೆಲ ವಸ್ತುಗಳಿಗೆ ಹುಡುಕಾಡಿದ ಕುರುಹು ಇತ್ತು. ರಾತ್ರಿ 9ರಿಂದ 11ರವರೆಗೆ ವಿಪರೀತ ಜೋರಾಗಿತ್ತು ಎಂದು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದ್ದಾರೆ.
ಶಂಕರ್ ಅವರಿಗೆ ಊಟ ತಂದುಕೊಡುವ ಹುಡುಗ ಮನೆಗೆ ಊಟ ತಂದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಆತ ಕಾಲಿಂಗ್ ಬೆಲ್ ಬಾರಿಸಿದರೂ ಪೂಜಾರಿ ಓಗೊಡಲಿಲ್ಲ ಮತ್ತು ಬಾಗಿಲನ್ನು ತಳ್ಳಿದಾಗ ತಾನೇ ತೆರೆದುಕೊಂಡಿತು.
ಪೂಜಾರಿಯವರು ಬೆಂಗಳೂರಿನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಅವರು ಪತ್ನಿ ಮತ್ತು ಮಕ್ಕಳು ಮುಂಬೈನಲ್ಲಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೋಸ್ಟ್ ಮಾರ್ಟಂಗಾಗಿ ಶವವನ್ನು ರವಾನಿಸಿದ್ದಾರೆ.












Click it and Unblock the Notifications