ಓಎಂಸಿ ರೆಡ್ಡಿ ವಿರುದ್ಧ ಸಿಡಿದೆದ್ದ ಮಾಜಿ ಮಾಲಿಕರು
ಕರ್ನಾಟಕದ ನೆರೆಯ ಆಂಧ್ರದ ಓಬುಳಾಪುರಂ ಗ್ರಾಮ ವ್ಯಾಪ್ತಿಯಲ್ಲಿ ಆಂಧ್ರಪ್ರದೇಶ ಕೈಗಾರಿಕಾ ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡು ಓಎಂಸಿಗೆ ನೀಡಿದ್ದ 250 ಎಕರೆ ಭೂಮಿಯಲ್ಲಿ ಪ್ರವೇಶ ಮಾಡಿದ ಸಿಪಿಐ ಮತ್ತು ರೈತ ಸಂಘ 'ಭೂ ಮಾಲೀಕರಿಗೇ ಈ ಭೂಮಿ ನೀಡಿ" ಎಂದು ಪ್ರತಿಭಟನೆ ನಡೆಸಿತು.
ಉದ್ಧೇಶಿತ ಭೂಮಿಯ ಮಾಜಿ ಮಾಲೀಕರು ಸ್ಪರ್ಧೆಗೆ ಬಿದ್ದು ಭೂಮಿಗಳಲ್ಲಿ ಕಟ್ಟಿಗೆಗಳನ್ನು, ಕಲ್ಲುಗಳನ್ನು ನೆಟ್ಟರು. ಸರ್ಕಾರ ಮತ್ತು ಓಎಂಸಿ ಕಂಪನಿ ವಿರುದ್ಧ ಘೋಷಣೆಗಳನ್ನು ಕೂಗಿ ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅನೇಕರು ಭೂ ಒತ್ತವರಿಗಾಗಿ ವಿಶೇಷ ಪ್ರಯತ್ನಗಳನ್ನು ನಡೆಸಿದರು.
ಈ ಸಂದರ್ಭದಲ್ಲಿ ಕಂಪನಿಯ ಪರವಾಗಿದ್ದ ಕಾವಲುಗಾರರ (ಸೆಕ್ಯುರಿಟಿ ಗಾರ್ಡ್) ತಾತ್ಕಾಲಿಕ ಶೆಡ್ಗಳನ್ನು ಧ್ವಂಸ ಮಾಡಿ, ಅಲ್ಲಲ್ಲಿದ್ದ ಓಎಂಸಿ ಆಸ್ತಿಪಾಸ್ತಿಯನ್ನು ಹಾಳು ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರತಿಭಟನೆಯಲ್ಲಿ ಜಿಲ್ಲಾ ಸಿಪಿಐ ಅಧ್ಯಕ್ಷ ಜಗಧೀಶ, ರೈತ ಸಂಘದ ಕಾರ್ಯದರ್ಶಿ ಕಾಟಮಯ್ಯ ಸೇರಿ 20ಕ್ಕೂ ಹೆಚ್ಚಿನ ಸಂಖ್ಯೆಯ ಮುಖಂಡರು ಪಾಲ್ಗೊಂಡಿದ್ದರು.
ಎಲ್ಲರೂ ಒಕ್ಕೊರಲಿನಿಂದ 'ಪ್ರಾಣ ಕೊಟ್ಟೇವು, ಭೂಮಿ ನೀಡುವುದಿಲ್ಲ" ಎಂದು ಘೋಷಣೆಗಳನ್ನು ಕೂಗುತ್ತಾ ಹೆಜ್ಜೆ ಹಾಕುತ್ತಿದ್ದುದ್ದು ಕಮ್ಯುನಿಸ್ಟ್ ಕ್ರಾಂತಿಯನ್ನು ನೆನಪಿಸುತ್ತಿತ್ತು. ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಶಂಕ್ರಯ್ಯ ಅವರು ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ, ಸರ್ಕಾರಕ್ಕೆ ಕಳುಹಿಸುವುದಾಗಿ ತಿಳಿಸಿದರು.
ಬಿಗಿ ಬಂದೋಬಸ್ತ್ : ಸಿಪಿಐ ಮತ್ತು ರೈತ ಸಂಘದ ಜಂಟಿ ಪ್ರತಿಭಟನೆ ಹಾಗೂ ಭೂಮಿ ಅತಿಕ್ರಮಣದ ಹಿನ್ನಲೆಯಲ್ಲಿ ಓಬುಳಾಪುರಂ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಡಿ. ಹಿರೇಹಾಳ್ ಗ್ರಾಮದಲ್ಲೂ ಕೂಡ ಪೊಲೀಸ್ ಭದ್ರತೆ ಹೆಚ್ಚಿನ ಸಂಖ್ಯೆಯಲ್ಲಿತ್ತು.