18 ಕೋಟಿ ಭೂಮಿಮ್ಯಾಗೆ 350 ಕೋಟಿ ಎತ್ತಿದ ಭೂಪ
2007ರ ಅವಧಿ ಆಂಧ್ರಪ್ರದೇಶದ ವೈಎಸ್ ರಾಜಶೇಖರ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಬ್ರಹ್ಮಣಿ ಉಕ್ಕು ಉದ್ಯಮಕ್ಕೆ 17,000 ಎಕರೆ ಭೂಮಿ ಮಂಜೂರು ಮಾಡಿತ್ತು.
ನಂತರ ಕಡಪ ಜಿಲ್ಲೆಯ ಮುದ್ದನೂರು ಸಮೀಪ ಏರ್ಪೋರ್ಟ್ ನಿರ್ಮಾಣಕ್ಕಾಗಿ 3,500 ಎಕರೆ ಭೂಮಿ ನೀಡಲಾಗಿತ್ತು. ಈ ವಿಮಾನನಿಲ್ದಾಣದಲ್ಲಿ ರಾತ್ರಿ ಪ್ರಯಾಣ, ನಿಲುಗಡೆ, ಸಂಚಾರಕ್ಕೆ ಆದ್ಯತೆ ನೀಡಲಾಗುವುದು. ಎವಿಯೇಷನ್ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ರೆಡ್ಡಿಗಳು ಹೇಳಿದ್ದರು.
ಸುಮಾರು ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಯೋಜನೆ ಇದಾಗಿದೆ ಎಂದು ಆಂಧ್ರ ಅಸೆಂಬ್ಲಿಯಲ್ಲಿ ರೆಡ್ಡಿಗಳನ್ನು ವೈಎಸ್ಆರ್ ಸಮರ್ಥಿಸಿಕೊಂಡಿದ್ದರು.
ಹೀಗೆ ಉದ್ಯಮಕ್ಕೆ ಬಲಗಾಲಿಟ್ಟ ರೆಡ್ಡಿಗಳು ನಾಲ್ಕು ವರ್ಷವಾದರೂ ಈ ಜಾಗದಲ್ಲಿ ಯಾವುದೇ ಘಟಕವನ್ನು ಸ್ಥಾಪಿಸದೆ ಬೋರ್ಡ್ ವೊಂದರಿಂದಲೇ ಕಂಪನಿ ನಡೆಸಿದ ಸಾಧನೆ ಮೆರೆದಿದ್ದಾರೆ.
ಆದರೆ ಸರ್ಕಾರದಿಂದ 18 ಕೋಟಿ ರೂ ಪಡೆದ ಭೂಮಿಯಿಂದ ರೆಡ್ಡಿ 350 ಕೋಟಿ ರೂ ಗಳಿಸಿದ್ದಾರೆ. ಹಾಲಿ ಆಂಧ್ರಪ್ರದೇಶ ಸರ್ಕಾರ, ವೈಎಸ್ ಆರ್ ಕೈಗೊಂಡ ಯೋಜನೆಗಳ ಮೇಲೆ ಕಣ್ಣು ಹಾಕುತ್ತಿಲ್ಲ. ಆದರೆ, ವಿರೋಧ ಪಕ್ಷಗಳು ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಿವೆ.
ಜಿಮ್ 2010 ಆಶ್ವಾಸನೆ ಫೇಕ್ : ಜೂನ್ 2010ರಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲೂ ಬಳ್ಳಾರಿಯಲ್ಲಿ ಹೊಸ ಉಕ್ಕು ಕಂಪನಿ ಸ್ಥಾಪಿಸುವ ಬಗ್ಗೆ ರೆಡ್ಡಿ ಸೋದರರು, ವಿದೇಶಿ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದ್ದರು.
ಬ್ರಹ್ಮಣಿ ಸ್ಟೀಲ್ಸ್ ಬಗ್ಗೆ ಹೆಚ್ಚಿಗೆ ಪ್ರಚಾರ ಸಿಕ್ಕಿತ್ತು.36 ಸಾವಿರ ಕೋಟಿ ರೂ ಬಂಡವಾಳದ ಈ ಉದ್ಯಮ 6 ದಶಲಕ್ಷ ಟನ್ ಅದಿರು ಉತ್ಪಾದಿಸುವ ಗುರಿ ಹೊಂದಿತ್ತು. ಇನ್ನೂ ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವ ಮಾತು ಬಿಡಿ, ಅದೂ ಸಾಧ್ಯವಿಲ್ಲದ ಮಾತು ಎಂದು ಜನಕ್ಕೆ ತಕ್ಷಣವೇ ಆರ್ಥವಾಗಿತ್ತು.
ಪೋಸ್ಕೋ ಮಿತ್ತಲ್ ಗೆ ಟಾಂಗ್ ಕೊಡುವಂತೆ ದೊಡ್ಡ ಘಟಕ ಸ್ಥಾಪಿಸುವ ರೆಡ್ಡಿಯ ಯೋಜನೆ ಇಂದಿಗೂ ಆರಂಭವಾಗಿಲ್ಲ. ಸರ್ಕಾರ ಈ ಬಗ್ಗೆ ಕೇಳುತ್ತಿಲ್ಲ. ಬಂಡವಾಳ ಹೂಡಿಕೆ ಒಪ್ಪಂದದ ಕಥೆ ಏನಾಯ್ತು ಆ ಜನಾರ್ದನನೇ ಬಲ್ಲ.