ಮೈಸೂರು ಬಳಿಯ ಗ್ರಾಮದಲ್ಲಿ ನಿತ್ರಾಣವಾಗಿದ್ದ ಚಿರತೆ ಸೆರೆ
ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಚಿರತೆ ಮಲಗಿರುವುದನ್ನು ಕಂಡ ಕೆಲವರು ಗ್ರಾಮದಲ್ಲಿ ಸುದ್ದಿ ಹರಡಿದ್ದಾರೆ. ಇದರಿಂದ ಕುತೂಹಲಗೊಂಡ ಜನರು ಚಿರತೆಯಿದ್ದ ಜಮೀನಿನತ್ತ ಧಾವಿಸಿದ್ದಾರೆ. ಆದರೆ ಈ ಚಿರತೆ ಸಂಪೂರ್ಣ ಅಸ್ವಸ್ಥವಾಗಿದ್ದರಿಂದ ಜನರ ಬೊಬ್ಬೆ ಕಿರುಚಾಟಕ್ಕೆ ಪ್ರತಿಕ್ರಿಯಿಸದೆ ಅದರ ಪಾಡಿಗೆ ಅದು ಮಲಗಿಕೊಂಡಿದೆ.
ಗ್ರಾಮಸ್ಥರು ಚಿರತೆ ಬಂದಿರುವ ವಿಷಯವನ್ನು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿಗಳು ಬಲೆ ಬೀಸಿ ಚಿರತೆಯನ್ನು ಹಿಡಿದಿದ್ದಾರೆ. ಅದು ನಿತ್ರಾಣಗೊಂಡಿರುವುದು ಅರಿವಿಗೆ ಬಂದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಎಚ್.ಡಿ.ಕೋಟೆ ಬಳಿಯ ಅರಣ್ಯಕ್ಕೆ ಬಿಡಲಾಗಿದೆ.
ಮೈಸೂರು ವ್ಯಾಪ್ತಿಯಲ್ಲಿ ಆಗಾಗ್ಗೆ ಹೊಲಗದ್ದೆಗಳಲ್ಲಿ ಚಿರತೆಗಳು ಆಗಾಗ್ಗೆ ಕಾಣಿಸಿಕೊಳ್ಳುತ್ತಾ ರೈತರ ಕುರಿ, ದನಕರುಗಳನ್ನು ತಿಂದು ಹಾಕುತ್ತಿರುವ ಘಟನೆಗಳು ಆಗಿಂದಾಗ್ಗೆ ನಡೆಯುತ್ತಿದ್ದು, ರೈತರು ಇದರಿಂದ ಭಯಭೀತರಾಗಿದ್ದಾರೆ.
ಅರಣ್ಯದಿಂದ ನಾಡಿನತ್ತ ತೆರಳುವ ಚಿರತೆಗಳು ಕಬ್ಬಿನ ಗದ್ದೆಗಳಲ್ಲಿ ಅವಿತು ಕುಳಿತು ರೈತರ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿವೆ. ರಾತ್ರಿ ಹೊತ್ತಿನಲ್ಲಿ ದನದ ಕೊಟ್ಟಿಗೆ ಹಾಗೂ ಕುರಿಮಂದೆಗಳ ಮೇಲೆ ದಾಳಿ ಮಾಡಿ ಕರುಗಳು ಹಾಗೂ ಕುರಿಗಳನ್ನು ಸಾಯಿಸಿರುವ ಹಲವಾರು ಪ್ರಕರಣಗಳು ನಡೆದಿವೆ.