ಬಳ್ಳಾರಿ ರೆಡ್ಡಿ ಕುಟೀರವಿದು ಯಜಮಾನನಿಲ್ಲದ ಮನೆಯು
ಪತ್ನಿ ಲಕ್ಷ್ಮಿ ಅರುಣಾ, ಹೈಸ್ಕೂಲ್ ಓದುತ್ತಿರುವ ಮಗಳು ಬ್ರಹ್ಮಿಣಿ, ಪ್ರಾಥಮಿಕ ಶಾಲೆಗೆ ಹೋಗುವ ಮಗ ಕಿರೀಟಿ ಸೇರಿದಂತೆ ಇಡೀ ರೆಡ್ಡಿ ಕುಟುಂಬ ವರ್ಗಕ್ಕೆ ಸಿಡಿಲು ಬಡಿದಂತಾಗಿದೆ. ಮಕ್ಕಳು ಶಾಲೆಗೆ ಹೋಗದೆ ರಚ್ಚೆ ಹಿಡಿದಿದ್ದಾರೆ. ಅವರನ್ನು ಸಂತೈಸಲು ತಾಯಿ ಅರುಣಾ ಪಡಬಾರದ ಪಾಡುಪಡುತ್ತಿದ್ದಾರೆ.
ಪುತ್ರ ಕಿರೀಟಿಯಂತೂ 'ಅಪ್ಪನಿಲ್ಲದ ಅರಮನೆ ನಮಗೂ ಬೇಡ, ನಾವೂ ಅಪ್ಪ ಇರುವಲ್ಲಿಗೆ (ಜೈಲಿಗೆ) ಹೋಗೋಣ' ಎಂದು ಹಠ ಹಿಡಿದಿದ್ದಾನೆ. ಜನಾರ್ದನ ರೆಡ್ಡಿ ಅವರು ಪುತ್ರ ಕಿರೀಟಿಗಾಗಿ ಬೇಕೆಂದ ವಾಹನ, ಅತ್ಯಾಧುನಿಕ ವಿಡಿಯೋ ಕ್ಯಾಮೆರಾ, ಮನೆಯಲ್ಲೇ ಚಿತ್ರಮಂದಿರ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನೂ ಕಲ್ಪಿಸಿದ್ದರು.
ಎಷ್ಟೇ ವ್ಯವಹಾರ ಹಾಗೂ ರಾಜಕೀಯ ಒತ್ತಡವಿದ್ದರೂ, ಕುಟುಂಬದ ಸದಸ್ಯರಿಗಾಗಿ ಬಿಡುವು ಮಾಡಿಕೊಳ್ಳುತ್ತಿದ್ದ ಜನಾರ್ದನ ರೆಡ್ಡಿ ಒಂದಿಷ್ಟು ಸಮಯ ಅವರಿಗಾಗಿಯೇ ಮೀಸಲಿರುಸುತ್ತಿದ್ದರು. ತಮ್ಮ ಜೊತೆ ತಮ್ಮ ಕುಟುಂಬವನ್ನು ಕೂಡ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ ಅವರು, ಕುಟುಂಬದ ಬೇಕು ಬೇಡಗಳಿಗೆ ಸ್ಪಂದಿಸುತ್ತಿದ್ದರು. ಈಗಿನ ಪರಿಸ್ಥಿತಿ ನೋಡಿದರೆ ಕರುಳು ಚುರ್ ಎನ್ನುತ್ತಿದೆ ಎನ್ನುತ್ತಿದ್ದಾರೆ ರೆಡ್ಡಿ ಅವರ ಸೋದರ ಸಂಬಂಧಿಗಳು.
ಬ್ರಹ್ಮಿಣಿ ಹಾಗೂ ಕಿರೀಟಿ ಒಂದು ವಾರದಿಂದ ಅಪ್ಪನಿಗಾಗಿ ಇನ್ನಿಲ್ಲದ ಹಠ ಮಾಡುತ್ತಿದ್ದಾರೆ. ಬಳ್ಳಾರಿಯ ಸೇಂಟ್ ಫಿಲೋಮಿನಾ ಹೈಸ್ಕೂಲ್ನಲ್ಲಿ ಬಹ್ಮಿಣಿ ಓದುತ್ತಿದ್ದರೆ, ಪೀಪಲ್ ಟ್ರೀ ಶಾಲೆಯಲ್ಲಿ ಕಿರೀಟಿ 4ನೇ ತರಗತಿ ವಿದ್ಯಾರ್ಥಿ. ಯಾರೆಷ್ಟೇ ಸಂತೈಸಿದರೂ ಜನಾರ್ದನ ರೆಡ್ಡಿ ಕುಟುಂಬ ಸಾಂತ್ವನಕ್ಕೊಳಗಾಗುತ್ತಿಲ್ಲ ಎನ್ನುತ್ತಿದ್ದಾರೆ ಸಂಬಂಧಿಗಳು.