ಮಾಧ್ಯಮಗಳೇ ಗಮನಿಸಿ, ನಾನೇನು ವಿಲನ್ ಅಲ್ಲ
ಜಂತಕಲ್ ಮೈನಿಂಗ್ ಕಂಪೆನಿ ಗುತ್ತಿಗೆ ಲೈಸನ್ಸ್ ನವೀಕರಣ ಹಾಗೂ ವಿಶ್ವಭಾರತಿ ಸೊಸೈಟಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಗುರುವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಕೋರ್ಟ್ ಸಮನ್ಸ್ ಗೆ ಬೆಲೆಕೊಟ್ಟು ಇಂದು ನ್ಯಾಯಾಲಯಕ್ಕೆ ನಾನು ಹಾಗೂ ನನ್ನ ಧರ್ಮಪತ್ನಿ ಅನಿತಾ ಅವರು ವಿಚಾರಣೆಗೆ ಹಾಜರಾಗಿದ್ದೇವೆ ಎಂದು ಕುಮಾರಸ್ವಾಮಿ ಪೀಠಿಕೆ ಹಾಕಿ ಸುದ್ದಿಗೋಷ್ಠಿ ಆರಂಭಿಸಿದರು.
ನಾನು ಹಾಗೂ ನನ್ನ ಕುಟುಂಬ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಾ ಬಂದಿರುವುದು ಲೋಕಕ್ಕೆ ತಿಳಿದ ವಿಷಯ. ಅದರಂತೆ ನ್ಯಾಯಾಲಯಕ್ಕೆ ತಲೆ ಬಾಗುವುದು ನಮ್ಮ ಕರ್ತವ್ಯ.
ಆ.30, ಸೆ.5 ಹಾಗೂ ಸೆ.7 ನೇ ತಾರೀಖು ಏನು ಲೋಕಾಯುಕ್ತ ನ್ಯಾಯಾಲಯದಿಂದ ನಮಗೆ ಖುದ್ದು ಹಾಜರಾತಿಗೆ ಸಮನ್ಸ್ ಬಂದಿತ್ತು ಅದರ ಹಿನ್ನೆಲೆಯಲ್ಲಿ ನಾವು ಇಂದು ಹಾಜರಾಗಿದ್ದೇವೆ.
ಮಾಧ್ಯಮ ಮಿತ್ರರೇ ಗಮನಿಸಿ: ಬಂಧನ ಭೀತಿಯಿಂದ ಮಾಜಿ ಮುಖ್ಯಮಂತ್ರಿಗಳು ಕೋರ್ಟ್ ಗೆ ಹಾಜರಾಗುತ್ತಿಲ್ಲ. ಅನಾರೋಗ್ಯ ಒಂದು ನೆಪ ಅಷ್ಟೇ. ಭ್ರಷ್ಟಾಚಾರ ವಿರುದ್ದ ಹೋರಾಟ ಬೂಟಾಟಿಕೆ ಎಂದು ಏನು ಕೆಲವು ಖಾಸಗಿ ಮಾಧ್ಯಮಗಳು ನನ್ನ ವಿರುದ್ಧ ಸುದ್ದಿ ಪ್ರಸಾರ ಮಾಡಿದ್ದಾರೆ ಅದರಿಂದ ನನಗೆ ತುಂಬಾ ನೋವಾಗಿದೆ.
ನಾನು ನನ್ನ ವಕೀಲರು ಏನು Instructions ಕೊಟ್ರೋ ಅದರಂತೆ ನಡೆದುಕೊಳ್ಳುವುದು ನನ್ನ ಕರ್ತವ್ಯ. ಹಾಗಾಗಿ ನಾನು ಈ ಮುಂಚೆ ಕೋರ್ಟ್ ವಿಚಾರಣೆಗೆ ಬರಲಾಗಲಿಲ್ಲ. ಕೋರ್ಟ್ ನೀಡುವ ತೀರ್ಪಿಗೆ ನಾವು ತಲೆ ಬಾಗುತ್ತೇವೆ. ಭ್ರಷ್ಟಾಚಾರ ವಿರುದ್ಧ ಹೋರಾಟ ನಿರಂತರ ಎಂದು ಕುಮಾರಸ್ವಾಮಿ ಅವರು ಘೋಷಿಸಿದರು.
ಕಿಕ್ಕಿರಿದ ಜನಸಂದಣಿ ನಡುವೆ ನಡೆದ ಚುಟುಕು ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಪಕ್ಕದಲ್ಲಿ ಜಮೀರ್ ಅಹ್ಮದ್ ಹಾಗೂ ಮಾಗಡಿ ಶಾಸಕ ಬಾಲಕೃಷ್ಣ ಕಾಣಿಸಿಕೊಂಡರು. ವಿಚಾರಣೆ ಮುಗಿದ ನಂತರ ಶಾಸಕಿ ಅನಿತಾ ಅವರು ನೇರವಾಗಿ ಕಾರಿನೆಡೆಗೆ ತೆರಳಿದ್ದರು.