ವೈದ್ಯರೇ ದಾಖಲೆ ಆಮೇಲೆ, ಮೊದಲು ಮಗವಿನ ಜೀವ ಉಳಿಸಿ
ಸರ್ಕಾರ ಬಡವರಿಗೆ ಅನುಕೂಲವಾಗಲೆಂದು ಹಲವು ಯೋಜನೆಗಳನ್ನು ಅನುಷ್ಠಾನ ಜಾರಿ ಮಾಡಿದೆ. ಆ ಯೋಜನೆಗಳು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ಬರದಿದ್ದಾಗ ಎಂತಹ ಅನಾಹುತಗಳು ಆಗುತ್ತವೆ ಎನ್ನುವುದಕ್ಕೆ ಈ ಘಟನೆಯೇ ಒಂದು ಉತ್ತಮ ಉದಾಹರಣೆ. ಮೂರು ತಿಂಗಳ ಹಸುಗೂಸಿನೊಂದಿಗೆ ಓಡಾಡಿ ಸುಸ್ತಾದ ಮಹಿಳೆ ಕೊನೆಗೆ ಜಿಲ್ಲಾಧಿಕಾರಿ ಕಚೇರಿಯ ಆವರಣದ ಹುಲ್ಲುಹಾಸಿನ ಮೇಲೆ ಸೀರೆ ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಾ ಮಗುವಿಗೆ ಹಾಲುಣಿಸುತ್ತಿದ್ದಾಳೆ.
ನಾಗಮ್ಮ ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ಆಶ್ರಯ ಕಾಲೋನಿಯ ಅಲೆಮಾರಿ ಸಮುದಾಯ(ಕುಂಚಕೊರುವರು)ದವಳು. ಹೃದಯ ಶಸ್ತ್ರ ಚಿಕಿತ್ಸೆಗಾಗಿ ವಾಜಪೇಯಿ ಆರೋಗ್ಯಶ್ರೀ ಯೋಜನೆ ಅಡಿಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಒಳ ರೋಗಿಯಾಗಿ ಸೇರ್ಪಡೆಯಾಗಿದ್ದರು. ಚಿಕಿತ್ಸೆಗೆ ಸಿದ್ದತೆ ನಡೆಯುವ ಸಂದರ್ಭದಲ್ಲಿ ಸರಿಯಾದ ದಾಖಲೆಗಳಿಲ್ಲವೆಂದು ಮರಳಿ ಕಳುಹಿಸಿದ್ದಾರೆ. ಇದರಿಂದ ಮುಗ್ದ ಮಗು ಸಾವು ಬದುಕಿನ ಜೊತೆ ಹೊರಾಟ ನಡೆಸುತ್ತಿದೆ.
ಬಿಪಿಎಲ್ ಪಡಿತರ ಚೀಡಿಯಲ್ಲಿ ದುರ್ಗಪ್ಪ ಎಂಬ ಹೆಸರಿದೆ, ಅದರಲ್ಲಿ ಫೋಟೋ ಇಲ್ಲ. ಗುರುತಿಗಾಗಿ ಮತದಾರರ ಚೀಟಿಯಲ್ಲಿ ಹೆಸರು ತಪ್ಪಾಗಿದೆ. ಮತದಾರನ ಹೆಸರಿನ ಜಾಗಕ್ಕೆ ತಂದೆ ಹೆಸರು. ತಂದೆ ಹೆಸರು ಜಾಗಕ್ಕೆ ಮತದಾರನ ಹೆಸರು ನಮೂದಾಗಿದೆ. ಕ್ಷುಲ್ಲಕ ತಪ್ಪಿನಿಂದಾಗಿ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ದೊರೆಯುತಿಲ್ಲ. ಹೆಸರನ್ನು ಸರಿಪಡಿಸಿಕೊಂಡು ಬಂದರೆ ಚಿಕಿತ್ಸೆ ನೀಡುವುದಾಗಿ ನಾರಾಯಣ ಹೃದಯಾಲಯದ ವೈದ್ಯರು ಹೇಳಿದ್ದಾರೆ.
ಹತ್ತು ದಿನದೊಳಗೆ ಚಿಕಿತ್ಸೆ ನೀಡಿದರೆ ಮಾತ್ರ ಮಗು ಬದುಕುತ್ತದೆ. ಈಗಾಗಲೇ 7 ದಿನಗಳು ಕಳೆದಿವೆ. ದಾಖಲೆಗಳು ಸರಿಪಡಿಸಲೆಂದು ಜಿಲ್ಲಾಧಿಕಾರಿಗಳ ಕಚೇರಿ, ತಹಶೀಲ್ದಾರ ಕಚೇರಿ ಅಲೆಯುತ್ತಿದ್ದಾರೆ. ಆದರೂ ದಾಖಲೆಗಳು ತಿದ್ದುಪಡೆಯಾಗಿಲ್ಲ, ಮಗು ಶ್ರೀಗುರು ಬದುಕಬೇಕಾದರೆ ತಪ್ಪಾಗಿ ನಮೂದಿಸಿರುವ ದಾಖಲೆಗಳನ್ನು ಸರಿಪಡೆಸಿ ಜಿಲ್ಲಾಡಳಿತ ಶಸ್ತ್ರ ಚಿಕಿತ್ಸೆಗೆ ಅವಕಾಶ ಮಾಡಿಕೊಡಬೇಕಾಗಿದೆ. ದಂಪತಿ ಅಂಗಲಾಚುವುದನ್ನು ಕಂಡರೆ ಎಂತಹ ಕಲ್ಲು ಹೃದಯವೂ ಕರಗದೇ ಇರದು. ಈ ದಂಪತಿಯ ಫೋನ್ ನಂಬರ್: 8861362465.
ದಾಖಲೆಗಳಿದ್ದಾಗ ಮಾತ್ರ ಚಿಕಿತ್ಸೆ ನೀಡುವುದು ಎಂತಹ ನ್ಯಾಯ? ದಾಖಲೆಗಳಿಲ್ಲದಿದ್ದರೆ ಚಿಕಿತ್ಸೆ ನೀಡಬಾರದೆ? ಇದು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸಮಯವೂ ಅಲ್ಲ. ಮೊದಲು ಮಗುವಿಗೆ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಲಿ. ದಾಖಲೆಗಳಿದ್ದರೂ ಮಾನವೀಯತೆಯೊಂದಿದ್ದರೆ ಚಿಕಿತ್ಸೆ ನೀಡಲು ಸಾಧ್ಯವೆಂದು ವೈದ್ಯರು ಇಡೀ ಜಗತ್ತಿಗೆ ತೋರಿಸಲಿ.