ಹಾರುವ ಹಕ್ಕಿ ರೆಡ್ಡಿಯ ರೆಕ್ಕೆ ಮುರಿದ ಸಿಬಿಐ

ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯದ ಕಾರಣ ತೀವ್ರ ಮುಜುಗರಕ್ಕೆ ಈಡಾಗಿದ್ದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಕಡಿಮೆಯಾಗಿತ್ತು. ಸಚಿವ ಸ್ಥಾನಕ್ಕಾಗಿ ಬಿಜೆಪಿ ವರಿಷ್ಠರ ಮೇಲೆ ಒತ್ತಡದ ತಂತ್ರವನ್ನು ರೆಡ್ಡಿ ಸಹೋದರರು ಅನುಸರಿಸತೊಡಗಿದ್ದರು.
ಮಾಧ್ಯಮಗಳನ್ನು ದಿಕ್ಕುತಪ್ಪಿಸುವ ವಿಚಾರದಲ್ಲಿ ಬಿ. ಶ್ರೀರಾಮುಲು ರಾಜೀನಾಮೆ ಪ್ರಕರಣಕ್ಕೆ ಆದ್ಯತೆ ನೀಡಿದ ರೆಡ್ಡಿ ಬೆಂಗಳೂರಿನಲ್ಲಿದ್ದ ಜಗನ್ಮೋಹನ ರೆಡ್ಡಿ ಅವರನ್ನು ಮನೆಯಲ್ಲಿ ರಹಸ್ಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಭಾನುವಾರ ರಾತ್ರಿಯೇ ಜನಾರ್ದನ ರೆಡ್ಡಿ ವಿದೇಶಕ್ಕೆ ಹೋಗಬೇಕಿತ್ತು. ಆದರೆ, ಬಿ. ಶ್ರೀರಾಮುಲು ಅವರು ಸಂಜೆಯವರೆಗೆ ರಾಜೀನಾಮೆ ಸಲ್ಲಿಸಲು ಆಗದ ಕಾರಣ ಸೋಮವಾರ ರಾತ್ರಿ ವಿದೇಶಕ್ಕೆ ತೆರಳುವ ಸಾಧ್ಯತೆಗಳಿದ್ದವು.
15 ದಿನಗಳ ಕಾಲ ವಿದೇಶ ಪ್ರವಾಸ ಮುಗಿಸಿ ಬಳ್ಳಾರಿಗೆ 2 ದಿನಗಳ ಹಿಂದೆ ಆಗಮಿಸಿದ್ದ ಜನಾರ್ದನ ರೆಡ್ಡಿ, ಯಾವುದೇ ಕಾರಣಕ್ಕೂ ಸಿಬಿಐ ಬಂಧನಕ್ಕೆ ಒಳಗಾಗಬಾರದು ಎನ್ನುವ ಉದ್ಧೇಶ ಹೊಂದಿದ್ದರು. ವೈ.ಎಸ್.ಆರ್. ಜಗನ್ಮೋಹನ ರೆಡ್ಡಿ ಅವರು ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್ನ ಕೆಲ ವರಿಷ್ಠರನ್ನು ಭೇಟಿ ಆದ ನಂತರ ದೆಹಲಿ ತಲುಪಿ ಅಲ್ಲಿಂದಲೇ ಇಂಡೋನೇಷ್ಯಾಕ್ಕೆ ತೆರಳುವ ಪ್ರವಾಸ ಸಿದ್ಧವಾಗಿತ್ತು ಎನ್ನಲಾಗಿದೆ.
ಜನಾರ್ದನ ರೆಡ್ಡಿ ಅವರು ಇಂಡೋನೇಷ್ಯಾದಲ್ಲಿ ಕಬ್ಬಿಣದ ಅದಿರು ಗಣಿಯನ್ನು, ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿಗಾರಿಕೆಯನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿ ಇಂಡೋನೇಷ್ಯಾದಲ್ಲೇ ಉಳಿಯುವ ವಿಚಾರದಲ್ಲಿ ವಿದೇಶ ಪ್ರವಾಸಕ್ಕೆ ತೆರಳಲು ಯೋಜಿಸಿದ್ದರು ಎಂದು ಹೇಳಲಾಗಿದೆ. ಜನಾರ್ದನ ರೆಡ್ಡಿ ಅವರು ಸಿಬಿಐ ಬಂಧನದ ಯೋಜನೆಯನ್ನೇ ಬುಡಮೇಲು ಮಾಡಿರುವ ಅಧಿಕಾರಿಗಳು ನಿರೀಕ್ಷಿಸಿದ ಅವಧಿಗೆ ಮೊದಲೇ ಅವರನ್ನು ಬಳ್ಳಾರಿಯಲ್ಲಿ ಸೋಮವಾರ ಬಂಧಿಸಿದ್ದಾರೆ.












Click it and Unblock the Notifications