ಕೊಪ್ಪಳ: ಸದಾನಂದ ಗೌಡಗೆ ಮೊದಲ ಸವಾಲು

ಈ ಕ್ಷೇತ್ರದ ಶಾಸಕರಾಗಿದ್ದ ಜೆಡಿಎಸ್ನ ಕರಡಿ ಸಂಗಣ್ಣ ಅವರು ಮಾರ್ಚ್ 3ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹೇಮಾಮಾಲಿನಿ ಪರ ಮತ ಹಾಕಿದ್ದರು. ಆ ನಂತರ ಅಂದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು ರಾಜೀನಾಮೆ ಕೊಟ್ಟು ಸೆ. 3ಕ್ಕೆ 6 ತಿಂಗಳಾಗುತ್ತದೆ. ನಿಯಮ ಪ್ರಕಾರ 6 ತಿಂಗಳೊಳಗೆ ಚುನಾವಣೆ ನಡೆಸಬೇಕು.
ಆದರೆ, ಈ ಕ್ಷೇತ್ರದ ಚುನಾವಣಾ ತಕರಾರು ಅರ್ಜಿ ಹೈಕೋರ್ಟ್ನಲ್ಲಿ ಇದೆ ಎಂದು ಚುನಾವಣಾ ಆಯೋಗ ತಪ್ಪಾಗಿ ತಿಳಿದ ಕಾರಣ, ಚುನಾವಣೆ ವಿಳಂಬವಾಗಿದೆ ಎನ್ನಲಾಗಿದೆ. ಈ ರೀತಿ 6 ತಿಂಗಳ ನಂತರ ಚುನಾವಣೆ ನಡೆಸಬೇಕಾದರೆ, ಕೇಂದ್ರ ಕಾನೂನು ಸಚಿವಾಲಯದ ವಿಶೇಷ ಅನುಮತಿ ಅಗತ್ಯ ಇದೆ. ಆ ಪ್ರಕಾರ ಅನುಮತಿ ಪಡೆದು ವೇಳಾಪಟ್ಟಿ ಪ್ರಕಟಿಸಲಾಗಿದೆ. ಮೂಲಗಳ ಪ್ರಕಾರ ಸಂಗಣ್ಣ ಅವರ ಆಯ್ಕೆ ಪ್ರಶ್ನಿಸಿ 2008ರಲ್ಲೇ ವ್ಯಕ್ತಿಯೊಬ್ಬರು ಹೈಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಅದು 2009ರಲ್ಲಿ ವಜಾಗೊಂಡಿದೆ.
ಚುನಾವಣಾ ವೇಳಾಪಟ್ಟಿ:
ಸೆ. 2: ಅಧಿಸೂಚನೆ ಪ್ರಕಟ
ಸೆ. 9: ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಸೆ. 10: ನಾಮಪತ್ರಗಳ ಪರಿಶೀಲನೆ
ಸೆ. 12: ನಾಮಪತ್ರ ವಾಪಸಿಗೆ ಕೊನೆಯ ದಿನ
ಸೆ. 26: ಮತದಾನ
ಸೆ. 29: ಮತ ಎಣಿಕೆ, ಫಲಿತಾಂಶ
ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಎದುರಾಗಿರುವ ಮೊದಲ ಚುನಾವಣೆ ಇದಾಗಿದೆ. ಸಹಜವಾಗಿಯೇ ಸದಾನಂದಗೌಡರನ್ನೂ ಒಳಗೊಂಡಂತೆ ಬಿಜೆಪಿ ನಾಯಕರೆಲ್ಲರಿಗೂ ಇದು ಸವಾಲಿನ ಸನ್ನಿವೇಶವಾಗಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಾವಧಿಯ ಕೊನೆಯ 'ಆಪರೇಷನ್ ಕಮಲ'ಕ್ಕೆ ಒಳಗಾಗಿ ಜೆಡಿಎಸ್ ತೊರೆದು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾಗಿದ್ದ ಹಾಲಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (ಕೆಎಸ್ಎಸ್ಐಡಿಸಿ) ಅಧ್ಯಕ್ಷ ಕರಡಿ ಸಂಗಣ್ಣ ಅವರ ರಾಜಕೀಯ ಭವಿಷ್ಯ ಬರುವ ಸೆ. 26ರಂದು ನಿರ್ಧಾರವಾಗಲಿದೆ.












Click it and Unblock the Notifications