ಸೆ. 26ಕ್ಕೆ ಉಪಚುನಾವಣೆ: ಕೊಪ್ಪಳ ಕ್ಷೇತ್ರದ ಮಹಿಮೆ
ಹಾಗೆ ನೋಡಿದರೆ ಈ ಚುನಾವಣೆಯು ಮೂರೂ ಪ್ರಮುಖ ಪಕ್ಷಗಳ ಪೈಕಿ ಬಿಜೆಪಿ ಮತ್ತು ಜೆಡಿಎಸ್ಗೆ ಪ್ರಮುಖವಾಗಿದೆ. ಆಡಳಿತದಲ್ಲಿರುವುದರಿಂದ ಬಿಜೆಪಿಗೆ ಉಪ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಾಗಿದ್ದರೆ, ಕರಡಿ ಸಂಗಣ್ಣ ಪಕ್ಷ ತೊರೆದಿದ್ದರಿಂದ ಜೆಡಿಎಸ್ಗೆ ಈ ಕ್ಷೇತ್ರವನ್ನು ಉಳಿಸಿಕೊಳ್ಳುವ ಪ್ರತಿಷ್ಠೆ ಎದುರಾಗಿದೆ.
ಕರಡಿ ಸಂಗಣ್ಣ ಅವರು ಜೆಡಿಎಸ್ ತೊರೆದು ಬಿಜೆಪಿ ಸೇರುವ ಬಗ್ಗೆ ವರ್ಷದಿಂದಲೂ ಸುದ್ದಿಯಾಗಿದ್ದರೂ ಕೊನೆಗೆ ಕಳೆದ ಮಾರ್ಚ್ನಲ್ಲಿ ರಾಜ್ಯಸಭೆಯ ಉಪಚುನಾವಣೆ ನಂತರ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬಂದಿದ್ದರು. ಕೆಲದಿನಗಳ ನಂತರ ಸಂಗಣ್ಣ ಅವರಿಗೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷಗಿರಿ ದಯಪಾಲಿಸಲಾಗಿತ್ತು.
ಸದ್ಯಕ್ಕೆ ಬಿಜೆಪಿಯಿಂದ ಕರಡಿ ಸಂಗಣ್ಣ ಅವರೇ ಅಭ್ಯರ್ಥಿ ಎಂಬುದು ನಿಗದಿಯಾಗಿದೆ. ಕಾಂಗ್ರೆಸ್ನಿಂದ ಹೆಚ್ಚು ಕಡಿಮೆ ಹಿಂದಿನ ಬಾರಿ ಶಾಸಕರಾಗಿದ್ದ ಬಸವರಾಜ ಹಿಟ್ನಾಳ ಅವರನ್ನು ಕಣಕ್ಕಿಳಿಸುವುದು ಖಚಿತವಾಗಿದೆ.
ಆದರೆ, ಜೆಡಿಎಸ್ನಿಂದ ಮಾತ್ರ ಇನ್ನೂ ಅಭ್ಯರ್ಥಿ ಯಾರು ಎಂಬುದು ಅಂತಿಮವಾಗದೇ ಇದ್ದರೂ ಮಾಜಿ ಶಾಸಕ ವಿರೂಪಾಕ್ಷಗೌಡ ಮಾಲಿ ಮಾಟೀಲ ಪುತ್ರ ಪ್ರದೀಪ್ಗೌಡ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಸಯ್ಯದ್ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ.
ಇವರಿಬ್ಬರೂ ಈಗಾಗಲೇ ಕಳೆದ ನಾಲ್ಕು ತಿಂಗಳಿಂದಲೇ ಅಂದರೆ, ಕರಡಿ ಸಂಗಣ್ಣ ರಾಜಿನಾಮೆ ನೀಡಿದ ಬೆನ್ನಲ್ಲೇ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮತದಾರರನ್ನು ಸೆಳೆಯುವ ಕೆಲಸ ಶುರು ಮಾಡಿದ್ದಾರೆ. ಆದರೆ, ಇವರಿಬ್ಬರನ್ನು ಹೊರತುಪಡಿಸಿ ಬೇರೆಯವರನ್ನೂ ಅಭ್ಯರ್ಥಿಯನ್ನಾಗಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಲೋಕಾಯುಕ್ತ ನ್ಯಾಯಾಲಯದ ಪ್ರಕರಣಗಳಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಇದುವರೆಗೆ ಈ ಕ್ಷೇತ್ರದ ಉಪಚುನಾವಣೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬರುವ ಮೂರ್ನಾಲ್ಕು ದಿನಗಳಲ್ಲಿ ಅಭ್ಯರ್ಥಿ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.