ಬಿತ್ತಲ್ಲಪ್ಪೋ ಯಡಿಯೂರಪ್ಪ ಮೇಲೆ ಮತ್ತೊಂದು ಕೇಸು

ಉದ್ಯಮಿ ಆಲಂ ಪಾಷಾ ಅವರು, ಯಡಿಯೂರಪ್ಪ ಮತ್ತು ಮುರುಗೇಶ್ ನಿರಾಣಿಯವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಿ ಲೋಕಾಯುಕ್ತ ನ್ಯಾ. ಶಿವರಾಜ್ ಪಾಟೀಲ್ ಅವರಿಗೆ ದೂರು ನೀಡಿದ್ದಾರೆ. ಕೋರಮಂಗಲ ಮತ್ತು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ೀ ಭುಹಗರಣಗಳು ನಡೆದಿದ್ದು, ತಾವು ಎರಡು ಕಡೆ ತಾವು ಮೋಸ ಹೋಗಿರುವುದಾಗಿ ಪಾಷಾ ಅಲವತ್ತುಕೊಂಡಿದ್ದಾರೆ.
ಕೋರಮಂಗಲದಲ್ಲಿ ಸಾಫ್ಟ್ ವೇರ್ ಕಂಪನಿ ಸ್ಥಾಪಿಸುವುದಕ್ಕೆ ಸರಕಾರ 2005ರಲ್ಲಿ 12 ಎಕರೆ ಜಮೀನನ್ನು ಆಲಂ ಪಾಷಾ ಅವರ ಕಂಪನಿ ಹೆಸರಿಗೆ ಮಂಜೂರು ಮಾಡಿತ್ತು. ಜಮೀನು ಮಂಜೂರಾಗಿ ಎಲ್ಲ ಇಲಾಖೆಗಳಿಂದ ಒಪ್ಪಿಗೆ ಪಡೆದು ಪಾಷಾ ಅಲ್ಲಿ ಕಂಪನಿ ಆರಂಭಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.
ಆದರೆ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮತ್ತು ಹಿಂದಿನ ಸಿಎಂ ಯಡಿಯೂರಪ್ಪ ಈ ಜಮೀನನ್ನು ಮತ್ತೆ ಬಿಡಿಎ ಮೂಲಕ ಡಿನೋಟಿಫೈ ಮಾಡುವುದಕ್ಕೆ ಹೊರಟಿದ್ದಾರೆ. ಆ ಮೂಲಕ, ಪಾಷಾ ಅವರಿಗೆ ಮೋಸ ಮಾಡಿ ಕೋಟ್ಯಂತರ ರೂ. ನಷ್ಟವುಂಟು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇನ್ನೊಂದೆಡೆ, ಕಳೆದ ವರ್ಷ ನಡೆದ ಜಾಗತಿಕ ಬಂಡವಾಳ ಹೂಡಕೆದಾರರ ಸಮಾವೇಶದಲ್ಲಿ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ಪಾಷಾ ಅವರ 'ಪಾಷ್ ಸ್ಪೇಸ್ ಇಂಟರ್ ನ್ಯಾಷನಲ್ ಲಿಮಿಟೆಡ್' ಕಂಪನಿಗೆ 26 ಎಕರೆ ಜಮೀನು ಮಂಜೂರು ಮಾಡಿರುವುದಾಗಿ ಹೇಳಿತ್ತು.
ಆ ಪ್ರಕಾರ, ಪಾಷಾ, ಅಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನಿವೇಶ ನಿರ್ಮಿಸಿ ಕೊಡುವುದಕ್ಕೆ ಯೋಜನೆ ರೂಪಿಸಿಕೊಂಡಿದ್ದರು. ಯೋಜನೆಗೂ ಸರಕಾರ ಒಪ್ಪಿಗೆ ಸೂಚಿಸಿ ಜಮೀನು ಸ್ವಾಧೀನಪಡಿಸಿಕೊಂಡಿತ್ತು.
ಆದರೆ ಈಗ ನಕಲಿ ದಾಖಲೆ ಸೃಷ್ಟಿಸಿ ಇಡೀ ಯೋಜನೆಯನ್ನೇ ರದ್ದುಪಡಿಸಲಾಗಿದೆ. ಇದರಿಂದ ಪಾಷಾ ಕಂಪನಿಗೂ ಕೋಟ್ಯಂತರ ಹಣ ನಷ್ಟ ಮಾಡುವ ಜತೆಗೆ ಸರಕಾರದ ಬೊಕ್ಕಸಕ್ಕೂ ನೂರಾರು ಕೋಟಿ ರೂ.ವನ್ನು ಪರಿಹಾರ ಕೊಡಿಸುವ ನೆಪದಲ್ಲಿ ನಷ್ಟ ಮಾಡಿದ್ದಾರೆ.
ಇದರಲ್ಲಿಯೂ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಶಾಮೀಲಾಗಿದ್ದಾರೆಂದು ಆಲಂ ಪಾಷ ಲೋಕಾಯುಕ್ತರಿಗೆ ಕೊಟ್ಟಿರುವ ದೂರಲ್ಲಿ ಆರೋಪಿಸಿದ್ದಾರೆ.











Click it and Unblock the Notifications