ಯಡ್ಡಿಗೆ ಬೇಲ್ ಏಕೆ ಕೊಟ್ಟಿಲ್ಲ, ಎಷ್ಟು ವರ್ಷ ಜೈಲಾಗುತ್ತೆ?

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಏಕೆ ಬೇಲ್ ಸಿಕ್ಕಿಲ್ಲ, ಆರೋಪ ಸಾಬೀತಾದರೆ ಎಷ್ಟು ವರ್ಷ ಜೈಲು ಶಿಕ್ಷೆಯಾಗಬಹುದು ಎಂಬ ಕುತೂಹಲದ ಪ್ರಶ್ನೆಗಳು ನಗರದ ಸಿವಿಲ್ ಕೋರ್ಟ್ ಕಾಂಪ್ಲೆಕ್ಟ್ ಆವರನದ ಹೊರಗಡೆ ನಿಂತಿದ್ದ ಜನಜಂಗುಳಿಯಿಂದ ತೂರಿ ಬರುತ್ತಿದ್ದವು.
ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನು ಪಡೆಯಲು ವಿಫಲರಾಗಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಸಂಕಟ ಇನ್ನೂ ಮುಂದುವರೆದಿದೆ.
ಎಫ್ ಐಆರ್ ರದ್ದುಗೊಳಿಸಿ, ಶಿಕ್ಷೆಯಿಂದ ಪಾರು ಮಾಡುವಂತೆ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ನಾಲ್ಕು ಅರ್ಜಿಯಲ್ಲಿ ಈಗಾಗಲೇ ಎರಡು ಅರ್ಜಿಗಳು ತಿರಸ್ಕಾರಗೊಂಡಿದೆ. ಇನ್ನೆರಡು ಅರ್ಜಿಯಿಂದ ಬಚಾವಾಗುವ ಆಸೆ ಕೂಡಾ ಯಡಿಯೂರಪ್ಪ ಅವರಿಗಿಲ್ಲ.
ಜೈಲಿಗೆ ಕರೆದೊಯ್ಯಬಲ್ಲ ಕೇಸ್ ಗಳು: ಭಾರತೀಯ ದಂಡ ಸಂಹಿತೆ ಕಾಯ್ದೆ ಕಲಂ 420, 419,447, 123 ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಈ ಎಲ್ಲಾ ಪ್ರಕರಣಗಳಲ್ಲಿ ಜಾಮೀನು ರಹಿತ ವಾರೆಂಟ್ ಹೊರಡಿಸಬಹುದು. ಆರೋಪ ಸಾಬೀತಾದರೆ 10 ವರ್ಷದವರೆಗೂ ಜೈಲು ಶಿಕ್ಷೆ ನೀಡಬಹುದು.
ಜಾಮೀನು ಏಕೆ ನೀಡಿಲ್ಲ: ಯಡಿಯೂರಪ್ಪ ಆರೋಪ ಹೊತ್ತಿರುವ ಪ್ರಕರಣಗಳಲ್ಲಿ ಅನೇಕ ಐಎಎಸ್, ಐಪಿಎಸ್ ಅಧಿಕಾರಿಗಳು, ಕಂದಾಯ ಇಲಾಖೆ, ಗಣಿ ಇಲಾಖೆ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು ಸಾಕ್ಷಿದಾರರಾಗಿದ್ದಾರೆ.
ಈ ಸಂದರ್ಭದಲ್ಲಿ ಪ್ರಬಲ ಆರೋಪಿಯಾದ ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದರೆ ಸಾಕ್ಷಿಗಳನ್ನು ಬೆದರಿಸುವ ಅಥವಾ ಸಾಕ್ಷಿಗಳನ್ನು ನಾಶಪಡಿಸುವ ಸಾಧ್ಯತೆಯಿದೆ ಎಂಬ ವಾದವನ್ನು ಕೋರ್ಟ್ ಪುರಸ್ಕರಿಸಿದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಬೇಲ್ ಸಿಕ್ಕಿಲ್ಲ.












Click it and Unblock the Notifications