ಹೈಕೋರ್ಟಿಗೆ ಗಾಲಿಕುರ್ಚಿ ಮೂಲಕ ಕೃಷ್ಣ ಭಟ್ ಹಾಜರು
ಕೃಷ್ಣಭಟ್ ಎಲ್ಲಿದ್ದರೂ ಹುಡುಕಿ ಕೋರ್ಟ್ ಗೆ ಕರೆತರುವಂತೆ ಡಿಸಿಪಿ ಸೋನಿಯಾ ನಾರಂಗ್ ಅವರಿಗೆ ಜಸ್ಟೀಸ್ ಖೇಹರ್ ಆದೇಶ ನೀಡಿದ್ದರು. ಅದರಂತೆ, ಇಂದು ಜಯನಗರ ಎಸಿಪಿ ಜಿ.ಬಿ. ಮಂಜುನಾಥ್ ನೇತೃತ್ವದ ಪೊಲೀಸ್ ತಂಡ ಬಿಗಿ ಬಂದೋಬಸ್ಟ್ ನಡುವೆ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಆರೋಪಿಯನ್ನು ಹಾಜರು ಪಡಿಸಲಾಯಿತು.
ರೋಗಗ್ರಸ್ತ ಭಟ್ : ಕೃಷ್ಣಭಟ್ ಅವರನ್ನು ಅಂಬುಲೆನ್ಸ್ ಮೂಲಕ ಕೋರ್ಟ್ ಗೆ ಕರೆತಂದು, ಗಾಲಿ ಕುರ್ಚಿ ಮೇಲೆ ಕೂರಿಸಿಕೊಂಡು ನ್ಯಾಯಾಲಯದ ಆವರಣಕ್ಕೆ ಕರೆದೊಯ್ಯಲಾಯಿತು. ಆರೋಗ್ಯ ಸುಧಾರಣೆಗಾಗಿ 2 ವಾರ ಕಾಲಾವಧಿ ನೀಡುವಂತೆ ಭಟ್ ಪರ ವಕೀಲರು ಕೋರಿದರು. ಅದರೆ, ಜಸ್ಟೀಸ್ ಖೇಹರ್ ಒಂದು ವಾರ ಮಾತ್ರ ಕಾಲಾವಕಾಶ ನೀಡಿದರು.
ವಿಶ್ವಭಾರತಿ ಸಂಘದಲ್ಲಿ ಹಿರಿತನದ ಆಧಾರದ ಮೇಲೆ ಜೇಷ್ಠತಾ ಪಟ್ಟಿ ತಯಾರಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶ ಉಲ್ಲಂಘಿಸಿದ್ದ ವಿಶ್ವಭಾರತಿ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕ ಕೃಷ್ಣಭಟ್ ಅವರ ಮೇಲೆ ಲುಕ್ ಔಟ್ ನೋಟಿಸ್ ಜಾರಿಯಾಗಿತ್ತು.
ನಿವೇಶನ ಹಂಚಿಕೆ ಅವ್ಯವಹಾರದ ಆರೋಪಿ ಕೃಷ್ಣಭಟ್ ಮೇಲೆ ಜಾಮೀನು ರಹಿತ ವಾರೆಂಟ್ ಕೂಡಾ ಜಾರಿ ಮಾಡಲಾಗಿತ್ತು. ಇದೇ ಸೊಸೈಟಿಯ ನಿವೇಶನದ ಲಾಭ ಪಡೆದಿರುವ ಎಚ್ಡಿಕೆ ದಂಪತಿಗಳ ಜಾಮೀನು ಅರ್ಜಿ ಕೂಡಾ ವಜಾಗೊಂಡಿದ್ದು, ವಿಚಾರಣೆ ನಡೆಯಬೇಕಿದೆ.