ಗ್ಯಾಸ್ : ಇನ್ ಸ್ಪೆಕ್ಟರ್ ಮನೆಬಾಗಿಲು ತಟ್ಟಲಿದ್ದಾರೆ ಬಾಸ್
ದಿನಾಂಕ ವಿಸ್ತರಣೆಯಾಗದಿದ್ದರೂ, ಆಹಾರ ಕರ್ನಾಟಕ ವೆಬ್ ಸೈಟಿನಲ್ಲಿ ಎಲ್ ಪಿಜಿ ಸಂಪರ್ಕ ಕಳೆದುಕೊಂಡವರು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬಹುದು. ಅವರ ರೇಷನ್ ಕಾರ್ಡ್, ಎಲ್ ಪಿಜಿ ಗ್ರಾಹಕ ಕಾರ್ಡ್, ವಿದ್ಯುತ್ ಬಿಲ್ ಗಳನ್ನು ಪರಿಶೀಲಿಸಲು ಇಲಾಖೆಯ ಇನ್ ಸ್ಪೆಕ್ಟರ್ ಗಳು ಸಂಪರ್ಕ ಕಳೆದುಕೊಂಡವರ ಮನೆ ಬಾಗಿಲು ತಟ್ಟಲಿದ್ದಾರೆ.
ಇಲಾಖೆಯ ಕಾರ್ಯದರ್ಶಿ ಬಿಎ ಹರೀಶ್ ಗೌಡ ಅವರ ಪ್ರಕಾರ, "ಅಧಿಕಾರಿಗಳು ಮನೆಗೆ ಬಂದು ರೇಷನ್ ಕಾರ್ಡ್, ವಿದ್ಯುತ್ ಬಿಲ್ ಆರ್ಆರ್ ನಂಬರ್ ಗಳನ್ನು ಪರಿಶೀಲಿಸಿ ದಕ್ಕಿರುವ ಡೇಟಾ ಅಲ್ಪೋಡ್ ಮಾಡುತ್ತಾರೆ. ಮನೆಯಲ್ಲಿ ಯಾರಾದರೂ ಇಲ್ಲದಿದ್ದರೆ ಮತ್ತೆ ಬರುತ್ತಾರೆ."
ಇದರ ಜೊತೆಗೆ, ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಮತ್ತು ಒಂದಕ್ಕಿಂತ ಹೆಚ್ಚು ಗ್ಯಾಸ್ ಸಂಪರ್ಕ ಇದೆಯೆ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಿದ್ದಾರೆ. ಒಂದು ಕುಟುಂಬಕ್ಕೆ ಒಂದೇ ರೇಷನ್ ಕಾರ್ಡ್ ಹೊಂದಲು ಮಾತ್ರ ಅವಕಾಶವಿದೆ. ಆದ್ದರಿಂದ ಸರಿಯಾದ ದಾಖಲಾತಿ ಸಲ್ಲಿಸಲು ಸಾರ್ವಜನಿಕರಿಗೆ ಹರೀಶ್ ಗೌಡ ಕೋರಿದ್ದಾರೆ.
ಈ ಎಲ್ಲ ಗೊಂದಲಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಮನಗಂಡ ಮುಖ್ಯಮಂತ್ರಿ ಸದಾನಂದ ಗೌಡ ಅವರು, ಎಲ್ ಪಿಜಿ ಸಂಪರ್ಕ ಮತ್ತು ರೇಷನ್ ಕಾರ್ಡ್ ಎರಡನ್ನೂ ತಳಕುಹಾಕದಂತೆ ಕೊಲ್ಲೂರಿನಲ್ಲಿ ಆದೇಶಿಸಿದ್ದರು. ಆದರೂ, ದಾಖಲೆ ಪರಿಶೀಲನೆಗೆ ಅಧಿಕಾರಿಗಳು ಮುಂದಾಗಿದ್ದಾರೆ.