ಗೃಹಿಣಿಯರಿಗೆ ಇನ್ನಿಲ್ಲ ಗ್ಯಾಸ್ ಟ್ರಬಲ್, ಸದಾನಂದ ಅಭಯ
ಏನಪಾ ಅಂದರೆ ನಮ್ಮ ಗೃಹಿಣಿಯರಿಗೆ ಇನ್ನು ಮುಂದೆ ಅಡುಗೆ ಅನಿಲ ಸಂರ್ಕದ ಅಕ್ರಮ ಸಕ್ರಮ ರಗಳೆ ಬೇಡ. ಈಗಿರುವುದೆಲ್ಲ ಸದ್ಯಕ್ಕೆ ಸಕ್ರಮ ಸಂಪರ್ಕವೇ. ಎಲ್ ಪಿಜಿ ಗ್ಯಾಸ್ ಕನೆಕ್ಷನ್ ಎಲ್ಲಿ ಕೈತಪ್ಪುವುದೋ ಎಂಬ ಕಳವಳ ಬೇಡ ಎಂದು ಡಿವಿಎಸ್ ಅಭಯ ನೀಡಿದ್ದಾರೆ.
ಇದರಿಂದ ಮಹಿಳೆಯರು ಸದಾನಂದಗೊಂಡಿದ್ದರೆ ಅಕ್ಕಯ್ಯ ಶೋಭಾ ಕರಂದ್ಲಾಜೆ ಏನು ಮಾಡುತ್ತಾರೋ ಎಂಬ ಆತಂಕದಲ್ಲಿದ್ದಾರೆ. ಏಕೆಂದರೆ ಗ್ಯಾಸ್ ಕನೆಕ್ಷನ್ ಗಳನ್ನೆಲ್ಲ ಸರಿ ದಾರಿಗೆ ತರುವ ಹಾದಿಯಲ್ಲಿ ಶೋಭಾ ಮೇಡಂ ಮೂರ್ನಾಲ್ಕು ತಿಂಗಳಿಂದ ಅಕ್ರಮ ಗ್ಯಾಸ್ ಕನೆಕ್ಷನ್ ಮೇಲೆ ಮುಗಿಬಿದ್ದಿದ್ದರು. ಇದರಿಂದ ಸಕ್ರಮ ಕನೆಕ್ಷನ್ ಹೊಂದಿದ್ದವರು ಪರದಾಡುವಂತಾಗಿತ್ತು.
ಅಡುಗೆ ಅನಿಲ ಸಂಪರ್ಕ ವ್ಯವಸ್ಥೆ ಹಿಂದಿನಂತೆ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಉಡುಪಿಯಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಪಡಿತರ ಚೀಟಿಯಲ್ಲಿ ಅಕ್ರಮಗಳಿಂದಾಗಿ ಗ್ಯಾಸ್ ಕನೆಕ್ಷನ್ ಗೆ ಬರೆ ಹಾಕುವುದು ಬೇಡ.
ಮೊದಲು ಅಕ್ರಮ ಪಡಿತರ ಚೀಟಿಯನ್ನು ಮಟ್ಟಹಾಕೋಣ. ಅದನ್ನು ಸರಿದಾರಿಗೆ ತಂದರೆ ಟಡುಗೆ ಅನಿಲ ಸಂಪರ್ಕ ತಂತಾನೇ ಸರಿಹೋಗುತ್ತದೆ ಎಂದು ಡಿವಿಎಸ್ ಹೇಳಿದ್ದಾರೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 30 ಲಕ್ಷಕ್ಕೂ ಅಧಿಕ ಅಕ್ರಮ ಅನಿಲ ಸಂಪರ್ಕಗಳು ಜ್ವಲಿಸುತ್ತಿವೆ.