ಆಶ್ರಮದಲ್ಲಿ ಕಳ್ಳಕೃಷ್ಣನ ಹಬ್ಬ, ನಿತ್ಯಾನಂದ ಆಹ್ವಾನ
ಶ್ರೀ ಕೃಷ್ಣನ ಸುಂದರ ವಿಗ್ರಹಗಳಿಗೆ ಸಾದ್ಯಂತ ಅಲಂಕಾರ, ಕೃಷ್ಣಪೂಜೆ, ಬಾಲಕೃಷ್ಣನ ಲೀಲಾ ವಿನೋದಗಳನ್ನು ಕೊಂಡಾಡುವ ಬಗೆಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮನೆಮನೆಗಳಲ್ಲಿ , ದೇವಸ್ಥಾನಗಳಲ್ಲಿ, ಸಮುದಾಯ ಭವನಗಳಲ್ಲಿ ಆಚರಿಸಿದ ವಿವರಗಳು ಹರಿದುಬರುತ್ತಿವೆ.
ಕೃಷ್ಣನ ವಿಗ್ರಹಗಳಿಗೆ ಅಲಂಕಾರ ಮತ್ತು ತಮ್ಮ ಮಕ್ಕಳಿಗೆ ಬಾಲಕೃಷ್ಣನ ಅಲಂಕಾರ ಮಾಡಿದ ಫೋಟೋಗಳೂ ತಲುಪುತ್ತಿವೆ. ಆದರೆ, ಚಕ್ಕುಲಿ, ಕೋಡುಬಳೆ, ಮುಚ್ಛೋರೆ, ಕೊಬ್ರಿಚಿನ್ನಿ, ತೇಂಗೋಳು, ಶಂಕರಪೋಳಿ, ಖಾರಾ ಸೇವುಗಳನ್ನು ಮಾತ್ರ ಯಾರೂ ನಮಗೆ ಕಳಿಸಿಲ್ಲ ಎನ್ನುವುದೇ ಬೇಜಾರುಪಡುವ ಸಂಗತಿಯಾಗಿದೆ :-)
ಕೃಷ್ಣನ ಮಹಿಮೆ ಕೊಂಡಾಡುವುದಕ್ಕೆ ಭಾನುವಾರವೇ ಆಗಬೇಕಿಲ್ಲ. ದಿವ್ಯ ಪ್ರೇಮದಲ್ಲಿ ಮೀಯುವುದಕ್ಕೆ, ಕೃಷ್ಣನ ಹುಟ್ಟಿದ ಹಬ್ಬ ಆಚರಿಸಿಸುವುದಕ್ಕೆ, ಭಗವದ್ಗೀತೆಯ ಸಾರ ಸಂದೇಶವನ್ನು ಮನನ ಮಾಡಿಕೊಳ್ಳುವುದಕ್ಕೆ ಸಮಯಾಸಮಯವೆಂಬುದಿಲ್ಲ. ಈ ಮಾತು ಬಿಡದಿಯಲ್ಲಿರುವ ಪರಮಹಂಸ ನಿತ್ಯಾನಂದರ ಧ್ಯಾನಪೀಠಕ್ಕೆ ಪಕ್ವವಾಗಿ ಒಪ್ಪುತ್ತದೆ.
ಏಕೆಂದರೆ, ಇಂದು ಸೋಮವಾರ 22 ರಂದು ಬಿಡದಿಯ ಧ್ಯಾನಪೀಠದಲ್ಲಿ ವೈಭವದ ಕೃಷ್ಣ ಜನ್ಮಾಷ್ಟಮಿ ವ್ಯವಸ್ಥೆಯಾಗಿದೆ. ದೇಶವಿದೇಶಗಳ ಕೃಷ್ಣಭಕ್ತರು ಅಲ್ಲಿ ಕಲೆತು ಗೀತಕಾರನನ್ನು ಸ್ತುತಿಸುವ ಭಜನೆ, ಹೋಮ ಹವನ ಇತ್ಯಾದಿ ಕಾರ್ಯಕ್ರಮಗಳು ದಿನವಿಡೀ ನಡೆಯುತ್ತದೆ. ಕಾರ್ಯಕ್ರಮದ ಮುಖ್ಯ ಆಕರ್ಷಣೆ ಅಲಂಕರಿಸಿದ ಮಡಕೆಗಳನ್ನು ಪ್ರೀತಿಯಿಂದ ಒಡೆಯುವುದು. ಅದರಲ್ಲಿರುವ ಬೆಣ್ಣೆಯನ್ನು ನೆಕ್ಕುವುದು.
ಪರಮಹಂಸ ನಿತ್ಯಾನಂದ ಸ್ವಾಮಿ ಭಕ್ತಗಣವನ್ನು ಉದ್ದೇಶಿಸಿ ಇವತ್ತು ವಿಶೇಷ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಲಿದ್ದಾರೆ. ವಿಷಯ : eN-Love with Krishna. ಈ ದಿವ್ಯ ಕ್ಷಣಗಳನ್ನು ಅನುಭವಿಸಿ ಪಾವನರಾಗಬೇಕೆಂದು ಆಶ್ರಮದ ಭಕ್ತಕೋಟಿಗೆ ನಿತ್ಯಾನಂದ ಕರೆ ಕೊಟ್ಟಿದ್ದಾರೆ.