ಅನಂತ್ ಬಣಕ್ಕೆ ಡಿಸಿಎಂ ಇಲ್ಲ; ಯಡಿಯೂರಪ್ಪ ನಿರ್ಣಾಯಕ

ಒಂದೆಡೆ ಹಿರಿಯ ಮುಖಂಡರ ನಡುವೆ ಸಂಪುಟ ರಚನೆ ಸಂಬಂಧ ದಿನವಿಡೀ ಮಾತುಕತೆ ನಡೆದರೆ, ಮತ್ತೊಂದೆಡೆ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ನಡೆಯುವ ನಿರೀಕ್ಷೆ ಇದ್ದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಯೂ ನಡೆದಿತ್ತು. ಆದರೆ ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ರಾತ್ರಿ ನಗರಕ್ಕೆ ಬಂದ ಕೂಡಲೇ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ನಿವಾಸದಲ್ಲಿ ನಡೆದ ಸಭೆ ವಿಫಲವಾದ ಪರಿಣಾಮ ಎಲ್ಲ ನಿರೀಕ್ಷೆಗಳು ಹುಸಿಯಾದವು.
ಎರಡೂ ಬಣಗಳಿಗೆ ಸಮನಾಗಿ ಸಚಿವ ಸ್ಥಾನ ನೀಡುವುದು ಹಾಗೂ ಖಾತೆಗಳ ಹಂಚಿಕೆ ವಿವಾದ ಬಹುತೇಕ ಬಗೆಹರಿದಿದೆ. ಆದರೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.
ಸೋಮವಾರ ಮತ್ತೊಮ್ಮೆ ಮಾತುಕತೆ ನಡೆದರೂ ಬುಧವಾರಕ್ಕೂ ಮುನ್ನ ಸಚಿವ ಸಂಪುಟ ರಚನೆಯಾಗುವುದು ಅನುಮಾನ. ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ಮಾತ್ರ ಸಂಪುಟ ಸೇರುತ್ತೇವೆ ಎಂದು ಅನಂತಕುಮಾರ್ ಬಣ ಪಟ್ಟು ಹಿಡಿದಿರುವುದರಿಂದ ಅಷ್ಟು ಸುಲಭವಾಗಿ ಸಮಸ್ಯೆ ಇತ್ಯರ್ಥವಾಗುವ ಲಕ್ಷಣಗಳು ಕಾಣುತ್ತಿಲ್ಲ.
ಒಂದು ವೇಳೆ, ಯಾವುದೇ ಕಾರಣಕ್ಕೂ ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವುದಿಲ್ಲ ಎಂದು ಹೈಕಮಾಂಡ್ ಬಿಗಿಪಟ್ಟು ಹಿಡಿದರೆ, ಆಗ ಅನಂತಕುಮಾರ್ ಬಣ ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿಯುವ ಸಾಧ್ಯತೆಯೂ ಇದೆ. ಆದರೆ ಇದಕ್ಕೆ ಯಡಿಯೂರಪ್ಪ ಬಣದಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರ ಆಗಲಿದೆ.












Click it and Unblock the Notifications