ಚಾಮರಾಜನಗರ ಬರದಿದ್ದರೂ ಯಡ್ಡಿಗೆ ತಟ್ಟಿತೆ ಶಾಪ?
ರಾಜಕಾರಣಿಗಳು, ಕುತಂತ್ರಿಗಳು ವ್ಯವಸ್ಥಿತವಾಗಿ ಸೃಷ್ಟಿಸಿದ ಈ ಮೂಢನಂಬಿಕೆಗೆ ಜೋತು ಬಿದ್ದ ರಾಜ್ಯದ ಹಲವಾರು ಮುಖ್ಯಮಂತ್ರಿಗಳು, ಅಧಿಕಾರದಲ್ಲಿರುವ ತನಕ ಚಾಮರಾಜನಗರಕ್ಕೆ ಕಾಲಿಡಲಿಲ್ಲ. ಗುಂಡೂರಾವ್, ರಾಮಕೃಷ್ಣ ಹೆಗಡೆ,ಎಸ್ ಆರ್ ಬೊಮ್ಮಾಯಿ ಹಾಗೂ ವೀರೆಂದ್ರ ಪಾಟೀಲ್ ಚಾಮರಾಜನಗರಕ್ಕೆ ಭೇಟಿ ಕೊಟ್ಟ 6 ತಿಂಗಳಲ್ಲಿ ಅಧಿಕಾರ ಕಳೆದುಕೊಂಡಿದ್ದರು. ಇದನ್ನು ಕಂಡ ಎಸ್ ಬಂಗಾರಪ್ಪ, ಧರಂಸಿಂಗ್ ಚಾಮರಾಜನಗರಕ್ಕೆ ಕಾಲಿಡಲೇ ಇಲ್ಲ.
ಚಾಮರಾಜ ನಗರ ತಾಲೂಕಿನ ಹರದನಹಳ್ಳಿಯಲ್ಲಿ ಯಡಿಯೂರಪ್ಪ ಮನೆಯ ದೇವರು ಯಡಿಯೂರು ಸಿದ್ಧಲಿಂಗೇಶ್ವರ ಜನ್ಮ ಸ್ಥಳ ಇದೆ. ಆದರೂ, ಅಧಿಕಾರ ಕೈತಪ್ಪುವ ಭಯದಿಂದ ಒಮ್ಮೆ ಕೂಡಾ ಚಾಮರಾಜನಗರಕ್ಕೆ ಯಡಿಯೂರಪ್ಪ ಕಾಲಿಟ್ಟಿಲ್ಲ.
ದಿಟ್ಟ ಮಹಿಳೆ ಶೋಭಾ: ಚಾಮರಾಜನಗರಕ್ಕೆ ಹಿಡಿದಿರುವ ಶಾಪ ತೊಲಗಿಸಲು ಕೇರಳ ಜ್ಯೋತಿಷಿಗಳ ಮೊರೆ ಹೋದ ಅಂದಿನಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವೆ ಶೋಭಾ, ಚಾಮರಾಜ ದೇಗುಲದ ಎದಿರುನಲ್ಲಿರುವ ಉದ್ಯಾನದಲ್ಲಿ ಮುಚ್ಚಲ್ಪಟ್ಟಿರುವ ನೀರಿನ ಕಲ್ಯಾಣಿಯೇ ಇಷ್ಟೆಲ್ಲಾ ಅನರ್ಥ, ಅನಿಷ್ಟಕ್ಕೆ ಕಾರಣ ಎಂಬುದನ್ನು ಕಂಡು ಹಿಡಿದರು.
ಕಲ್ಯಾಣಿಗೆ ಹೊಸ ರೂಪ ಕೊಟ್ಟು ಸ್ವಚ್ಛಗೊಳಿಸುವ ಕಾರ್ಯ ಕೋಟಿಗಟ್ಟಲೆ ಹಣ ಸುರಿಯಲಾಯಿತು. ಆದರೆ, ಮೈಸೂರು ಉಸ್ತುವಾರಿ ಬದಲಾಗಿ ಶೋಭಾ ಅವರು ಇಂಧನ ಖಾತೆ ಸಚಿವರಾದರು. ಅಲ್ಲಿಗೆ ದೇಗುಲದ ಕಾಮಗಾರಿ ಅಲ್ಲಿಗೆ ನಿಂತು ಬಿಟ್ಟಿತು.
ಯಡಿಯೂರಪ್ಪ ಅವರನ್ನು ಅನುಸರಿಸಿದ ರೆಡ್ಡಿ ಸೋದರರು, ಶ್ರೀರಾಮುಲು, ಆರ್ ಅಶೋಕ್, ರಾಮದಾಸ್, ಸಿಎಚ್ ವಿಜಯಶಂಕರ್ ಮುಂತಾದವರು ಜಿಲ್ಲ್ಗೆ ಇನ್ನೂ ಕಾಲಿಟ್ಟಿಲ್ಲ. ಧೈರ್ಯ ಮಾಡಿ ಕಾಲಿಟ್ಟ ಹಾಲಪ್ಪ ಅತಂತ್ರರಾದರು. ನರೇಂದ್ರ ಸ್ವಾಮಿ, ಮಮ್ತಾಜ್ ಅಲಿಖಾನ್ ಗೂ ಅಂಥ ಬೆಲೆ ಸಿಕ್ಕಿಲ್ಲ.
ರೇಣುಕಾಚಾರ್ಯ, ವಿಶ್ವೇಶ್ವರ ಹೆಗಡೆ ಕಾಗೇರಿ, ನಾರಾಯಣಸ್ವಾಮಿ ಅವರುಗಳು ಮಾತ್ರ ಒಂದಿಷ್ಟು ಆರೋಪಗಳನ್ನು ಎದುರಿಸಿದ್ದು ಬಿಟ್ಟರೆ ಅವರ ಸ್ಥಾನಮಾನಕ್ಕೆ ಕುಂದು ಉಂಟಾಗಿಲ್ಲ. ಒಟ್ಟಿನಲ್ಲಿ ಚಾಮರಾಜನಗರ ಎಂದರೆ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಏನೋ ಒಂಥರಾ ಭಯ. ಜಿಲ್ಲೆಯ ಪ್ರಗತಿಗೆ ಮಾರಕವಾಗಿರುವ ಈ ನಂಬಿಕೆ ಆದಷ್ಟೂ ಬೇಗ ತೊಲಗಲಿ ಎಂಬುದು ಇಲ್ಲಿನ ಜನತೆಯ ಆಶಯ.