ಗುಂಡು ಸಚಿವ ರೇಣುಕಾಚಾರ್ಯ ಮುಳಮುಳನೆ ಅತ್ತ ಪ್ರಸಂಗ
'ಯಡಿಯೂರಪ್ಪ ಇನ್ನು ಮುಖ್ಯಮಂತ್ರಿಯಾಗಿ ಉಳಿಯಲಾರರು' ಎಂಬ ವಿಷಯ ಖಚಿತವಾಗುತ್ತಿದ್ದಂತೆ ನರ್ಸ್ ರೇಣುಕಾಚಾರ್ಯ ಅವರಿಗೆ ಉಮ್ಮಳಿಸಿ ಬಂದ ದುಃಖ ತಡೆಯಲಾಗಿಲ್ಲ. ಗುರುವಾರ ಮುಖ್ಯಮಂತ್ರಿಗೆ ಆನಿಕೊಂಡೇ ಇದ್ದ ರೇಣುಕಾಚಾರ್ಯ, ರೇಸ್ ಕೋರ್ಸ್ ರಸ್ತೆಯ ಮನೆಯಿಂದ ಹೊರಬಂದವರೇ ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಬಿದ್ದರು. ಅಷ್ಟೊತ್ತಿಗೆ ಅವರ ಕಣ್ಣು ಜಿನುಗುತ್ತಿತ್ತು.
ಒತ್ತರಿಸಿಕೊಂಡ ಬಂದ ದುಃಖ ತಡೆಯಲಾಗದೆ ಅಳತೊಡಗಿದರು. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ಯತ್ನಿಸಿದರು. ಉಹುಂ, ಸೂತಕದ ಛಾಯೆ ಅವರನ್ನು ಆವರಿಸಿತ್ತು. ಎಲ್ಲಾದರೂ ದೂರ ಹೋಗಿ ಒಬ್ಬಂಟಿಯಾಗಿ ಮನಸಾರೆ ಅಳಬೇಕು ಎನಿಸಿರಬೇಕು... ಕ್ಯಾಮರಾಗಳ ಕಣ್ಣು ತಪ್ಪಿಸಿ, ಹೊರಟೇ ಬಿಟ್ಟರು. ಇದನ್ನು ಟಿವಿಯಲ್ಲಿ ಕಣ್ಣಾರೆ ನೋಡಿ ಜಯಲಕ್ಷ್ಮಿ ಎಂಬ ಮಾಜಿ ನರ್ಸ್ ಒಂದು ಪೆಗ್ ಏರಿಸಿದರಂತೆ ಎಂಬುದು ಶುದ್ಧ ಕುಹಕ.
ಇದುವರೆಗೆ, ಯಡಿಯೂರಪ್ಪ ಪದತ್ಯಾಗದ ಹಿನ್ನೆಲೆಯಲ್ಲಿ ಅತ್ತವರ ಪಟ್ಟಿ ಹೀಗಿದೆ: ಶೋಭಾ ಕರಂದ್ಲಾಜೆ, ಭಾರತಿ ಶೆಟ್ಟಿ, ಪ್ರೊ.ಎಸ್.ಆರ್.ಲೀಲಾ, ಸುನಿಲ್ ವಲ್ಯಾಪುರೆ, ರೇಣುಕಾಚಾರ್ಯ...