ಗಣಿಗಾರಿಕೆ ವರದಿ: ಆರ್ ಟಿಐಗೆ ಮಾಧ್ಯಮಗಳ ಮೊರೆ
ಈ ಮಧ್ಯೆ, ಗಣಿಗಾರಿಕೆ ವರದಿ ಪಡೆಯಲು ಮಾಧ್ಯಮಗಳು ಹರಸಾಹಸಪಡುತ್ತಿದ್ದು, ಮಾಹಿತಿ ಹಕ್ಕು ಕಾಯಿದೆಯಡಿ (ಆರ್ ಟಿಐ) ವರದಿ ಪಡೆಯಲು ಸುದ್ದಿಗಾರರು ಸನ್ನದ್ದರಾಗಿದ್ದಾರೆ.
ಸ್ವತಃ ಲೋಕಾಯುಕ್ತ ಸಂತೋಷ್ ಹೆಗಡೆ ಅವರೇ ಈ ವಿಷಯವನ್ನು ಖಚಿತಪಡಿಸಿದ್ದು, ವರದಿ ತಿರಸ್ಕರಿಸುವುದಕ್ಕೆ ಸರಕಾರ ಎಲ್ಲ ಮಾರ್ಗಗಳನ್ನು ಅನುಸರಿಸುತ್ತಿದೆ. ಆದ್ದರಿಂದ ಅನಗತ್ಯವಾಗಿ ಯಾವುದೇ ಅಡ್ಡಿಯನ್ನು ಮೈಮೇಲೆ ಎಳೆದುಕೊಳ್ಳುವುದಿಲ್ಲ. ಮಾಧ್ಯಮಗಳಿಗೆ ನಿಧಾನವಾಗಿ ವರದಿ ಕೊಟ್ಟರಾಯಿತು ಎಂಬ ನಿಲುವು ತಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿ ನಡೆಸುವ ಬಗ್ಗೆಯೂ ಕಾನೂನು ಸಲಹೆ ಪಡೆಯಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಾಸ್ತವಾಗಿ, ಲೋಕಾಯುಕ್ತರ 'ಗಣಿಗಾರಿಕೆ' ವರದಿ ಈ ಹಿಂದೆಯೇ ಸರಕಾರಕ್ಕೆ ಸಲ್ಲಿಕೆಯಾಗಬೇಕಿತ್ತು. ಆದರೆ ಧಾರವಾಡದ ಸಮಾಜ ಪರೊವರ್ತನ ಸಮುದಾಯ ಎಂಬ ಸರಕಾರೇತರ ಸಂಸ್ಥೆಯು (ಎನ್ ಜಿಒ) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅದರಂತೆ ಸುಪ್ರೀಂಕೋರ್ಟ್ ಉನ್ನತಮಟ್ಟದ ಸಮಿತಿ (ಸಿಇಸಿ) ರಚಿಸಿ, ಸಮೀಕ್ಷಾ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಇದು ಲೋಕಾಯುಕ್ತ ವರದಿ ವಿಳಂಬಕ್ಕೆ ಸಕಾರಣವಾಯಿತು.
ವರದಿ ಮಂಡನೆಯಾದ ನಂತರವೂ ಅದನ್ನು ಶೈತ್ಯಾಗಾರದಲ್ಲಿಡುವ ದುರಾಲೋಚನೆಯಲ್ಲಿ ಸರಕಾರ, ವರದಿ ಅಧ್ಯಯನಕ್ಕಾಗಿ ಉನ್ನತ ಸಮಿತಿ ರಚಿಸಿ ವಿಳಂಬ ಧೋರಣೆ ಹೊಂದುವ ಸಾಧ್ಯತೆಯೂ ಇದೆ ಎಂದು ವಿಶ್ಲೇಷಿಸಲಾಗಿದೆ.