ಆರೋಪ ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿ
ಕುಟುಂಬದ ಜೊತೆ ಆರು ದಿನಗಳ ಮಾರಿಷಸ್ ಪ್ರವಾಸ ಮಾಡಿ ಬೆಂಗಳೂರಿಗೆ ಹಿಂದಿರುಗಿದ ನಂತರ ಪತ್ರಕರ್ತರನ್ನು ವಿಧಾನಸೌಧದಲ್ಲಿ ಉದ್ದೇಶಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ತಮ್ಮ ಮುಂದಿನ ರಾಜಕೀಯ ನಡೆಗಳ ಬಗ್ಗೆ ವಿವರಗಳನ್ನು ನೀಡಿದರು.
ದೂರವಾಣಿ ಕದ್ದಾಲಿಕೆಯ ಮುಖಾಂತರ ಅಕ್ರಮ ಗಣಿಗಾರಿಕೆಯ ವರದಿ ಸೋರಿಕೆಯ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ, ಇದನ್ನು ತಾವು ಗಂಭೀರವಾಗಿ ಪರಿಗಣಿಸಿದ್ದು, ಹಿಟ್ ಅಂಡ್ ರನ್ ಮಾಡುವವರನ್ನು ಮತ್ತು ಸೊಂಟದ ಕೆಳಗಿನ ಭಾಷೆ ಪ್ರಯೋಗಿಸುವವರನ್ನು ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನನಿತ್ಯ ಅಕ್ರಮ ಗಣಿಗಾರಿಕೆಯ ಬಗ್ಗೆ ಇಲ್ಲಸಲ್ಲದ ವರದಿಗಳು ಬರುತ್ತಿವೆ. ಲೋಕಾಯುಕ್ತರಿಂದ ಅಧಿಕೃತ ವರದಿ ಬರುವವರೆಗೆ ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದ ಅವರು, ಎಸ್ಎಂ ಕೃಷ್ಣ ಅವರ ಅವಧಿಯಿಂದ, ಕುಮಾರಸ್ವಾಮಿ ಮತ್ತು ಇಲ್ಲಿಯವರೆಗೆ ನಡೆದಿರುವ ಗಣಿಗಾರಿಕೆಯ ಬಗ್ಗೆ ವಿವರ ನೀಡಲಾಗಿದೆ. ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವುದರ ಬಗ್ಗೆ ಚಿಂತಿಸುತ್ತೇನೆ ಎಂದರು.
ಎಲ್ಲ ರಾಜಕೀಯ ಪಕ್ಷಗಳಿಂದ ರಾಜೀನಾಮೆ ನೀಡಲು ಬರುತ್ತಿರುವ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು. ನಾನು ತಪ್ಪು ಮಾಡಿಲ್ಲ, ಯಾವುದೇ ಕಾರಣಕ್ಕೂ ನೀಡುವುದಿಲ್ಲ ಎಂಬ ಧೋರಣೆ ಅವರ ಪ್ರತಿ ಮಾತಿನಲ್ಲೂ ಇಣುಕಿ ಕಾಣುತ್ತಿತ್ತು.
ಅವರು ಹೇಳಿರುವ ಪ್ರಮುಖ ಅಂಶಗಳು ಕೆಳಗಿನಂತಿವೆ
* ಮುಖ್ಯಮಂತ್ರಿಯ ವಿರುದ್ಧವೇ ಆರೋಪಗಳಿರುವುದರಿಂದ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಪತ್ರ ಬರೆದು ಅಕ್ರಮ ಗಣಿಗಾರಿಕೆ ತನಿಖೆ ನಡೆಸಲು ಮನವಿ.
* ಕರ್ನಾಟಕವನ್ನು ಮಾದರಿಯಾಗಿಟ್ಟುಕೊಂಡು ಅನೇಕ ವರ್ಷಗಳಿಂದ ದೇಶದಲ್ಲಿ ಲೂಟಿಯಾಗುತ್ತಿರುವ ಖನಿಜ ಸಂಪತ್ತನ್ನು ತಡೆಯಲು ಪ್ರಧಾನಿಗೆ ಆಗ್ರಹ.
* ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ, ಲೋಕಾಯುಕ್ತ ಸಂತೋಷ ಹೆಗಡೆ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಇರುವ ಸಮಿತಿ ರಚಿಸಿ ತನಿಖೆ ನಡೆಸಲು ಆಗ್ರಹ.
* ಬಿಜೆಪಿಯ ಮೂರು ವರ್ಷಗಳ ಸಾಧನೆ, ರಾಜ್ಯದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ಬಗ್ಗೆ ಪ್ರಮುಖ ಅಂಶಗಳನ್ನು ಗಡ್ಕರಿಗೆ ಪತ್ರಮುಖೇನ ಯಡಿಯೂರಪ್ಪ ನಿವೇದನೆ.
* ವೆಂಕಯ್ಯ ನಾಯ್ಡು, ಅನಂತ ಕುಮಾರ್ ಮತ್ತು ಧರ್ಮೇಂದ್ರ ಪ್ರಧಾನ್ ಅವರಿಗೂ ಅಕ್ರಮ ಗಣಿಗಾರಿಕೆ ವರದಿ ತರಿಸಿಕೊಳ್ಳಲು ಆಗ್ರಹ.
* ಬಿಜೆಪಿ ರಾಷ್ಟ್ರಾಧ್ಯಕ್ಷ ನಿತೀನ್ ಗಡ್ಕರಿ ಅವರಿಗೆ ಧಮ್ಕಿ ಹಾಕುವಂತಹ ಮಾತು ಹೇಳಿಲ್ಲ. ಟಿವಿ9 ಚಾನಲ್ ನಲ್ಲಿ ಬಂದ ವರದಿ ಸತ್ಯಕ್ಕೆ ದೂರ. ಟಿವಿ ಮಾಧ್ಯಮಗಳು ಜವಾಬ್ದಾರಿಯಿಂದ ವರ್ತಿಸಬೇಕು.
* ಸಂಸತ್ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರ ಜೊತೆ ಜುಲೈ 31ರಂದು ತುರ್ತು ಸಭೆ. ಮುಂದಿನ 21 ತಿಂಗಳು ಒಳ್ಳೆಯ ಜನಪರ ಆಡಳಿತ ನೀಡುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸುವ ಬಗ್ಗೆ ಚರ್ಚೆ.
* ಆಗಸ್ಟ್ 5ರಿಂದ ಎರಡು ಹಂತಗಳಲ್ಲಿ 20 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸತ್ಯ ಸಂಗತಿ ಜನರ ಮುಂದಿಡುವ ಪ್ರಯತ್ನ. ಒಂದು ಅಂಶದ ಕಾರ್ಯಕ್ರಮವೇನೆಂದರೆ, ಅಭಿವೃದ್ಧಿ.
* ಖನಿಜ ಸಂಪತ್ತು ಉಳಿಯಬೇಕು. ಗಣಿಗಾರಿಕೆಯ ಎಂದರೆ ಅಕ್ರಮ ಸಕ್ರಮ ಅಲ್ಲ. ಇದು ನಿಲ್ಲಬೇಕು.