ಬಾಡುತಿಹ ಯಡ್ಡಿ, ಅರಳುತಿದೆ ಶೆಟ್ಟರ್ ಮುಖಕಮಲ
ಮುಂದಿನ ಮುಖ್ಯಮಂತ್ರಿ ಯಾರು ಆಗಬೇಕೆಂಬ ಚರ್ಚೆ ಸಾಕಷ್ಟು ನಡೆದಿದೆ. ತಿಳಿದುಬಂದ ಖಚಿತ ಮಾಹಿತಿಯ ಪ್ರಕಾರ, ಯಡಿಯೂರಪ್ಪ ಮೊದಲನೇ ಆಯ್ಕೆಯಾಗಿರುವ ಶೋಭಾ ಕರಂದ್ಲಾಜೆ ಮತ್ತು ಎರಡನೇ ಆಯ್ಕೆ ಮಗ ರಾಘವೇಂದ್ರ ಬಿವೈರನ್ನು ಬದಿಗೊತ್ತಿ, ಹಿರಿಯ ನಾಯಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ್ ಶೆಟ್ಟರ್ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ.
ಸೋಮವಾರವೆ ಮಾರಿಷಸ್ ಪ್ರವಾಸದಿಂದ ಮರಳಿ ದೆಹಲಿಗೆ ನೇರವಾಗಿ ಹೋಗುತ್ತಿರುವ ಯಡಿಯೂರಪ್ಪ ಇದಕ್ಕೆ ಅವಕಾಶ ನೀಡುತ್ತಾರಾ? ಅನೇಕ ಬಾರಿ ಅಂಡರ್ ಕರೆಂಟ್ ನಿಂದಾಗಿ ಕಾಲಕೆಳಗಿನ ಮರಳು ಸರಿಯುತ್ತಿದ್ದರೂ ಯಡಿಯೂರಪ್ಪ ತಮ್ಮ ಹಿಡಿತವನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ, ಕಾಲಕ್ರಮೇಣ ಅಕ್ರಮ ಗಣಿಗಾರಿಕೆ, ಸ್ವಜನ ಪಕ್ಷಪಾತ, ಡಿನೋಟಿಫಿಕೇಷನ್ ಆರೋಪಗಳು ಅವರನ್ನು ಸಾಕಷ್ಟು ದುರ್ಬಲವಾಗಿಸಿವೆ.
ವರಿಷ್ಠರ ಒತ್ತಡಕ್ಕೆ ಮಣಿದು ಯಡಿಯೂರಪ್ಪ ಕೊನೆಗೂ ತಮ್ಮ ಹಿಡಿತವನ್ನು ಸಡಿಲಗೊಳಿಸಿದರೆ, ಹುಬ್ಬಳ್ಳಿಯಿಂದ ನಾಲ್ಕು ಬಾರಿ ಎಂಎಲ್ಎ ಆಗಿರುವ, ರೆಡ್ಡಿಗಳ ಗೆಳೆತನವನ್ನೂ ಗಳಿಸಿಕೊಂಡಿರುವ, ಲಿಂಗಾಯತ ಸಮುದಾಯದವರೂ ಆಗಿರುವ ಜಗದೀಶ್ ಶೆಟ್ಟರ್ ಸದ್ಯದಲ್ಲಿಯೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಯಡಿಯೂರಪ್ಪ ಮನದಲ್ಲಿ ಏನೇನು ಲೆಕ್ಕಾಚಾರಗಳಿವೆಯೋ?
2009ರಲ್ಲಿ ರೆಡ್ಡಿಗಳು ಯಡಿಯೂರಪ್ಪನವರ ವಿರುದ್ಧ ದಂಗೆಯೆದ್ದಿದ್ದಾಗ ಜಗದೀಶ್ ಶೆಟ್ಟರ್ ಅವರು ಶೋಭಾರಿಂದ ಪ್ರಮುಖ ಖಾತೆಯನ್ನು ಕಿತ್ತುಕೊಂಡಿದ್ದರು. ಅಂದು ಹಾಕಿದ ಕಣ್ಣೀರನ್ನು ಯಡಿಯೂರಪ್ಪ ಮರೆತಿರಲೂ ಸಾಧ್ಯವಿಲ್ಲ. ಈಗ ಮತ್ತೆ ಶೋಭಾ ಅವರನ್ನು ಮುಖ್ಯಮಂತ್ರಿಯಾಗಿಸಬೇಕೆಂಬ ಮಹತ್ವಾಕಾಂಕ್ಷೆಗೆ ಸಂಚಕಾರ ತಂದಿದ್ದಾರೆ ಶೆಟ್ಟರ್. ಅಂತಿಮ ಗೆಲುವು ಯಾರದಾಗಲಿದೆ? [ಅಕ್ರಮ ಗಣಿಗಾರಿಕೆ ಸೋರಿಕೆ : ಧೂಳು ಮಣ್ಣು]