ಚಾಮುಂಡೇಶ್ವರಿ ವರ್ಧಂತಿ ಉತ್ಸವ: ಮೈಸೂರಿನಲ್ಲಿ ಸಂಭ್ರಮ
ಎಂದಿನಂತೆ ಮುಂಜಾನೆ 5.30ಕ್ಕೆ ನಿಗದಿಯಾಗಿದ್ದ ದೇವಿಯ ದರ್ಶನದ ಸಮಯವನ್ನು ಭಕ್ತರ ಅನುಕೂಲದ ದೃಷ್ಟಿಯಿಂದ ಬೆಳಿಗ್ಗೆ 8ಕ್ಕೆ ಬದಲಾಯಿಸಿದ್ದರಿಂದ ಭಕ್ತರಿಗೆ ಅನುಕೂಲವಾಯಿತು. ಬೆಳಿಗ್ಗೆಯಿಂದಲೇ ಆಗೊಮ್ಮೆ ಈಗೊಮ್ಮೆ ಜಿಟಿ ಜಿಟಿ ಮಳೆ ಬರುತ್ತಿದ್ದರೂ ಇದ್ಯಾವುದನ್ನು ಲೆಕ್ಕಿಸದೆ ಭಕ್ತರು ಚಾಮುಂಡಿಬೆಟ್ಟದತ್ತ ತೆರಳುತ್ತಿದ್ದದ್ದು ಕಂಡು ಬಂದಿತು.
ವರ್ಧಂತಿ ಪ್ರಯುಕ್ತ ಬೆಳಿಗ್ಗೆ ನಡೆದ ಚಿನ್ನದ ಪಲ್ಲಕ್ಕಿ ಉತ್ಸವದಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಪತ್ನಿ ಪ್ರಮೋದಾದೇವಿ ಒಡೆಯರ್ ಪಾಲ್ಗೊಂಡಿದ್ದರು. ರಥೋತ್ಸವಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಂಟಪೋತ್ಸವ, ಪ್ರಸಾದ ವಿನಿಯೋಗ ನಡೆಯಿತು. ಈ ವಾರ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಚಾಮುಂಡಿಬೆಟ್ಟಕ್ಕೆ ಹೆಚ್ಚಿನ ಬಸ್ಗಳನ್ನು ಕಲ್ಪಿಸಲಾಗಿತ್ತು. ಅಲ್ಲದೆ ಜನ ಸಂಚಾರಕ್ಕೆ ಪ್ರತ್ಯೇಕ ಮಾರ್ಗವನ್ನು ಕಲ್ಪಿಸಲಾಗಿತ್ತು.
ರಾತ್ರಿ 8.30ಕ್ಕೆ ಉತ್ಸವ, ಫಲಪೂಜೆ, ದರ್ಬಾರ್ ಉತ್ಸವ ನಡೆಯಲಿದೆ. ಬೆಳಿಗ್ಗೆಯಿಂದಲೇ ದಾನಿಗಳು ಭಕ್ತರಿಗೆ ಅನ್ನಸಂತರ್ಪಣೆಯನ್ನು ಹಮ್ಮಿಕೊಂಡಿದ್ದರು. ಚಾಮುಂಡೇಶ್ವರಿ ವರ್ಧಂತಿಯ ಅಂಗವಾಗಿ ಮೈಸೂರು ನಗರದಾದ್ಯಂತ ಅಲ್ಲಲ್ಲಿ ಚಾಮುಂಡೇಶ್ವರಿ ಅಮ್ಮನ ಪ್ರತಿಷ್ಠಾಪಿಸಿ ವಿಶೇಷ ಪೂಜೆ, ಮೆರವಣಿಗೆ ಹಾಗೂ ಅನ್ನದಾನವನ್ನು ಹಮ್ಮಿಕೊಳ್ಳಲಾಗಿದ್ದು ಹಬ್ಬದ ವಾತಾವರಣ ನಿರ್ಮಾಣವಾಗಿದೆ.