ಮಾರಿಷಸ್ ಹಾದಿಯಲ್ಲಿ ಮತ್ತೊಂದು ಆಣೆ ಪ್ರಮಾಣ ಪ್ರಹಸನ

ಲೆಹರ್ ಸಿಂಗ್ ಎಂಬ ದೂತನನ್ನು ಕುಮಾರ ಸಂಧಾನಕ್ಕೆ ಕಳಿಸಿದ್ದರು ಎಂಬುದು ಬಾಂಬಿನ ಕಚ್ಚಾ ಸಾಮಗ್ರಿಯಾಗಿತ್ತು. ಯಡಿಯೂರಪ್ಪ ಪದತಲದಲ್ಲಿ ಸರಿಯಾಗಿಯೇ ಸ್ಫೋಟಿಸಿದ ಬಾಂಬ್ ಅವರ ಶಾಂತಿ, ನೆಮ್ಮದಿ ಸಕಲವನ್ನೂ ನಾಶಗೊಳಿಸಿತ್ತು. ಹಾಗೆಂದು ಇದೇನೂ ಅವರಿಗೆ ಅನಿರೀಕ್ಷಿತ ಆಘಾತವಲ್ಲ. ಆದರೂ ಸ್ಫೋಟದಿಂದ ಚೇತರಿಸಿಕೊಂಡವರೇ ವರ್ತಮಾನ ಪತ್ರಿಕೆಗಳ ಮೂಲಕ ಆಣೆ ಪ್ರಮಾಣದ ಪ್ರಹಸನಕ್ಕೆ ನಾಂದಿ ಹಾಡಿದರು. ಮುಂದಿನದೆಲ್ಲ ಈಗಾಗಲೇ ಇತಿಹಾಸ ಪುಟಗಳಲ್ಲಿ ಸೇರಿದೆ.
ಇದೀಗ ಬಂದ ಸುದ್ದಿಯಂತೆ 'ಲೋಕಾಯುಕ್ತ ಭೇಟಿ ನಿಜ, ಆದರೆ..ಅದು ಬೇರೆ ವಿಷ್ಯ' ಎಂದು ಸನ್ಮಾನ್ಯ ಧನಂಜಯ್ ಕುಮಾರ್ ನೀಡಿರುವ ಸಂಧಾನ ಸ್ಪಷ್ಟೀಕರಣಕ್ಕೆ 'ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ' ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ತಿರುಗೇಟು ನೀಡಿದ್ದಾರೆ. ಇದು ಮತ್ತೊಂದು ಆಣೆ ಪ್ರಮಾಣ ಪ್ರಹಸನಕ್ಕೆ ನಾಂದಿಯಾಗುತ್ತದಾ!? ಕಾದುನೋಡುವ?
ಈಗೇನಪಾ ಅಂದರೆ .... ಈಗಲೂ ಅಷ್ಟೆ ಯಡಿಯೂರಪ್ಪ ಅವರ ಪರಿಸ್ಥಿತಿ ಭಿನ್ನವಾಗಿಯೇನೂ ಇಲ್ಲ. ಯಡಿಯೂರಪ್ಪ ಮಾರಿಷಸ್ ಗೆ ತೆರಳುವ ಮುನ್ನಾ ಕಾಲದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು 'ಬರೀ ಒಬ್ಬ ದೂತ ಏನು ಬಂತು, ಇಡೀ ಪಟಾಲಮ್ಮೇ ಸಂಧಾನಕ್ಕೆ ಬಂದಿತ್ತು' ಎಂದು ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಮುಂದಿದೆ ಮಾರಿ ಹಬ್ಬ. ಗಣಿಗಾರಿಕೆಯಲ್ಲಿ ನೀವೂ (ಯಡಿಯೂರಪ್ಪ) ಭಾಗಿಯೇ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಅಕ್ರಮ ಗಣಿಯಲ್ಲಿ ಸಿಕ್ಕಿಹಾಕಿಕೊಳ್ಳುವ ಬಗ್ಗೆ ಸುಳಿವು ಪಡೆದಿದ್ದೇ ತಡ ಸನ್ಮಾನ್ಯ ಯಡಿಯೂರಪ್ಪನವರು ಸಕುಟುಂಬ ಪರಿವಾರ ಸಮೇತ ಮಾರಿಷಸ್ಸಿಗೆ ಜಾಲಿ ಟ್ರಿಪ್ ಹೊರಟಿದ್ದಾರೆ. ಕುತೂಹಲಕ್ಕಾಗಿ... ಲೋಕಾಯುಕ್ತ ಬಾಂಬ್ ಈ ಬಾರಿ ಏಕೆ ಸ್ಫೋಟಗೊಳ್ಳಲಿಲ್ಲ ಎಂಬುದರ ಬಗ್ಗೆ ಗಣಿಗಾರಿಕೆ ಮಾಡಿದಾಗ ಅದು ಎಲ್ಲರ ಬುಡಕ್ಕೂ ನೀರು ತರುವ ಖಾತ್ರಿಯಿರುವುದರಿಂದ ಎಲ್ಲ ಗಪ್ ಚುಪ್ ಅಂತೆ.
ಯಾರೇ ಕೂಗಾಡಲಿ ಊರೇ ಹೋರಾಡಲಿ ನಮ್ಮ ನೆಮ್ಮದಿಗೆ ಭಂಗವಿಲ್ಲ... ಎಂದು ಸಕಲ ಜನನಾಯಕರೂ ಕೋರಸ್ ನಲ್ಲಿ ಗುನುಗುತ್ತಿರುವುದು ಕೇಳಿಬರುತ್ತಿದೆ.











Click it and Unblock the Notifications