ಪೇಜಾವರ ಶ್ರೀಗಳಿಂದ ಮೈಸೂರು ದಸರಾ ಉದ್ಘಾಟನೆ

ಈ ಆಹ್ವಾನವನ್ನು ಸ್ವೀಕರಿಸಿರುವ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು, ನಾಡಿ ಅತ್ಯಂತ ದೊಡ್ಡ ಮಹೋತ್ಸವವನ್ನು ಉದ್ಘಾಟಿಸಲು ಅವಕಾಶ ನೀಡಿದ್ದು ಸಂಸತ ತಂದಿದೆ. ಅತ್ಯಂತ ಗೌರವದಿಂದ ಈ ಆಹ್ವಾನವನ್ನು ಸ್ವೀಕರಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಸೆಪ್ಟೆಂಬರ್ 28ರಿಂದ ಆರಂಭವಾಗುತ್ತಿರುವ ದಸರಾ ಉತ್ಸವಾಚರಣೆಯ ಸಿದ್ಧತೆಯ ಕುರಿತು ಸೋಮವಾರ ಕರೆಯಲಾಗಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈ ಸಂಗತಿಯನ್ನು ಘೋಷಿಸಿದರು.
80ನೇ ವರ್ಧಂತಿಗೆ ವಿಶ್ವೇಶ ತೀರ್ಥ ಸ್ವಾಮೀಜಿಯವರು ಕಾಲಿಟ್ಟಿರುವ ಸುಸಂದರ್ಭದಲ್ಲಿ ನಾಡಹಬ್ಬದ ಉದ್ಘಾಟನೆಯ ಗೌರವವನ್ನು ಪೇಜಾವರಶ್ರೀಗಳಿಗೆ ನೀಡಲಾಗಿದ್ದು, ಅವರು ಆಹ್ವಾನವನ್ನು ಸ್ವೀಕರಿಸಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.
ಭದ್ರತೆಗೆ ಆದ್ಯತೆ : ಜುಲೈ 13ರಂದು ಮುಂಬೈನಲ್ಲಿ ನಡೆದ ಸರಣಿ ಸ್ಫೋಟದ ಹಿನ್ನೆಲೆಯಲ್ಲಿ 401ನೇ ವೈಭವದ ಮೈಸೂರು ದಸರಾ ಸಂದರ್ಭದಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಭದ್ರತೆಗೆ ಸಂಬಂಧಿಸಿದಂತೆ ಎಲ್ಲಾ ಅನುಕೂಲಗಳನ್ನು ಮಾಡಿಕೊಡಲಾಗುವುದು ಎಂದು ಯಡಿಯೂರಪ್ಪ ನುಡಿದರು.
ಸೆಪ್ಟೆಂಬರ್ 28ರಿಂದ ಆರಂಭವಾಗಿ ಅಕ್ಟೋಬರ್ 6ರಂದು ಮುಗಿಯಲಿರುವ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಜನರು ಪ್ರವಾಹೋಪಾದಿಯಲ್ಲಿ ಮೈಸೂರಿಗೆ ಹರಿದುಬರಲಿದ್ದಾರೆ. ಈ ಕಾರಣದಿಂದಾಗಿ ಭದ್ರತೆಯ ನೆರಳಿನಲ್ಲಿಯೇ ದಸರಾ ನಡೆದರೂ ಆಶ್ಚರ್ಯವಿಲ್ಲ.
ಈ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಮೈಸೂರು ಉಸ್ತುವಾರಿ ಸಚಿವ ಡಾ. ರಾಮದಾಸ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು. ಅಂದ ಹಾಗೆ, ನಾಳೆ ಬೆಳಿಗ್ಗೆ ಮುಖ್ಯಮಂತ್ರಿಗಳು ಆರು ದಿನಗಳ ಮಾರಿಷಸ್ ಪ್ರವಾಸಕ್ಕೆ ಹೊರಡಲಿದ್ದಾರೆ.












Click it and Unblock the Notifications