'ವಿಶೇಷ ಪ್ರತಿನಿಧಿ'ಗಳು ಮನೆಗೆ ಬಂದಿದ್ದನ್ನು ಮುಚ್ಚಿಟ್ಟಿದ್ದೇಕೆ ಹೆಗ್ಡೆಜೀ?
ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ಶೀಘ್ರದಲ್ಲಿಯೇ ಬಹಿರಂಗವಾಗಲಿರುವ ವರದಿಯಿಂದ ಯಡಿಯೂರಪ್ಪ ಅವರ ಹೆಸರು ಕೈಬಿಡಬೇಕು ಎಂದು ಪ್ರಭಾವ ಬೀರಲು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಮತ್ತು ರಾಜ್ಯ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಧನಂಜಯ ಕುಮಾರ್ ತಮ್ಮ ಮನೆಗೆ ಬಂದಿದ್ದ ವಿಚಾರವನ್ನು ಐದು ದಿನಗಳಿಂದ ಮುಚ್ಚಿಟ್ಟಿದ್ದು ಏಕೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಸುಬ್ರಹ್ಮಣ್ಯ ನಗರದಲ್ಲಿ ಭಾನುವಾರ ಆಯೋಜಿಸಿದ್ದ 'ಕಾಂಗ್ರೆಸ್ ನಡಿಗೆ ಜನರ ಬಳಿಗೆ' ಕಾರ್ಯಕ್ರಮದಲ್ಲಿ ಮಾತನಾಡಿದ ಹರಿಪ್ರಸಾದ್, 'ಹೆಗ್ಡೆ ಅವರು ಬಿಜೆಪಿಯಲ್ಲಿನ ಭ್ರಷ್ಟರ ಕುರಿತು ಮೃದುಧೋರಣೆ ಅನುಸರಿಸುತ್ತಿದ್ದಾರೆ. ಬಿಜೆಪಿಯಲ್ಲಿನ ಭ್ರಷ್ಟರನ್ನು ಕಳೆದ ಎರಡು ವರ್ಷಗಳಿಂದ ರಕ್ಷಿಸುತ್ತಿದ್ದಾರೆ' ಎಂದು ಆರೋಪಿಸಿದರು.
ಹೆಗ್ಡೆ ಅವರು ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟರ ವಿರುದ್ಧ ಸೂಕ್ತ ಕ್ರಮ ಕೈಗೊಂಡಿದ್ದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಸಂಪುಟದ 12 ಸಚಿವರು ಈ ವೇಳೆಗೆ ಜೈಲಿನಲ್ಲಿರಬೇಕಾಗಿತ್ತು ಎಂದರು. ಹೆಗ್ಡೆ ಅವರು ಹಿಂದೆ ರಾಜೀನಾಮೆ ನೀಡಿದ್ದಾಗ ಇಡೀ ರಾಜ್ಯದ ಜನತೆ ರಾಜೀನಾಮೆ ನಿರ್ಧಾರ ಕೈಬಿಡುವಂತೆ ಅವರನ್ನು ಒತ್ತಾಯಿಸಿತು. ಆದರೆ ಅದಕ್ಕೆಲ್ಲ ಸೊಪ್ಪು ಹಾಕದ ಹೆಗ್ಡೆ, ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮಾತಿಗೆ ಒಪ್ಪಿ ರಾಜೀನಾಮೆ ಹಿಂಪಡೆದಿದ್ದೇಕೆ ಎಂದು ಪ್ರಶ್ನಿಸಿದರು.