ಮಳೆಗಾಗಿ ದುಗ್ಗಮ್ಮ ದೇವಿ ಮುಂದೆ ಸಂತೆಯೋ ಸಂತೆ!
ನಾಡಿನ ಅರ್ಧ ಭಾಗ ಮಳೆಯಿಂದ ತತ್ತರಿಸುತ್ತಿದ್ದರೆ, ಇಲ್ಲಿ ಮಾತ್ರ ಜುಲೈ ತಿಂಗಳ ಮಧ್ಯಂತರದಲ್ಲಿದ್ದರೂ ಹದವಾದ ಮಳೆಯಾಗುತ್ತಿಲ್ಲ. ಬೆಳೆಗಳು ಒಣಗುವ ಹಂತ ತಲುಪುತ್ತಿದ್ದು, ತಕ್ಷಣ ಮಳೆ ಸುರಿಸು ದೇವಿ ಎಂದು ದಾವಣಗೆರೆಯ ಜನತೆ ನಗರ ದೇವತೆ ದುಗ್ಗಮ್ಮನ ಗುಡಿ ಮುಂದೆ ಇಂದು ವಾರದ ಸಂತೆ ನಡೆಸಿದರು. ಪ್ರತೀ ಸಾರಿಯೂ ಈ ರೀತಿ ಮಾಡಿದಾಗ ಮಳೆಯಾಗುತ್ತಿದೆ. ಇದು ಇಂದು ನಿನ್ನೆ ಆರಂಭಗೊಂಡ ಪದ್ಧತಿಯಲ್ಲ. ಸುಮಾರು ವಷ೯ದಿಂದ ಈ ಪದ್ಧತಿ ನಡೆದುಕೊಂಡು ಬಂದಿದೆ.
ಪ್ರತೀ ಭಾನುವಾರ ದಾವಣಗೆರೆಯಲ್ಲಿ ಸಂತೆ ನಡೆಯುತ್ತದೆ. ಅದಕ್ಕೆಂದೇ ಕೆ.ಆರ್. ಮಾರುಕಟ್ಟೆ ಪ್ರದೇಶ ಇದೆ. ಅಲ್ಲಿ ಪ್ರತೀ ಭಾನುವಾರದ ಸಂತೆ ನಡೆಯುತ್ತದೆ. ಆದರೆ, ಮಳೆಗಾಲದಲ್ಲಿ ಮಳೆ ಬರಲಿಲ್ಲ ಅಂತ ಇಟ್ಟುಕೊಳ್ಳಿ ಆಗ ನಗರದ ಸಂತೆಯನ್ನು ದುಗ್ಗಮ್ಮನ ದೇವಸ್ಥಾನದ ಮುಂದೆ ಮಾಡಲಾಗುತ್ತದೆ. ಹೀಗೆ ಸಂತೆ ಮಾಡಿ ಕೆಲವೇ ದಿನಗಳಲ್ಲಿ ಮಳೆಯಾಗುತ್ತದೆ. ಇದು ಅಚ್ಚರಿಯಾದರೂ ಸತ್ಯ.
ಹಿಂದಿನ ಹಿರಿಕರು ಮಳೆಯಾಗದ್ದಕ್ಕೆ ದೇವಿಯ ಮುನಿಸು ಕಾರಣ. ಆಕೆಯನ್ನು ಗ್ರಾಮದವರು ಮರೆತಿದ್ದಕ್ಕೆ ಈ ರೀತಿ ಆಗುತ್ತದೆ. ಊರಿನ ಎಲ್ಲರೂ ಬರುವ ಜಾಗವೆಂದರೆ ಸಂತೆ. ಆದ್ದರಿಂದ ಆ ಸಂತೆಯನ್ನೇ ದೇವಸ್ಥಾನದ ಮುಂದೆ ಮಾಡಿದರೆ, ಸಂತೆಗೆ ಬಂದವರು ದೇವಿಗೆ ಪೂಜೆ ಸಲ್ಲಿಸಿ ಮಳೆ ತರೆಸು ತಾಯಿ ಎಂದು ಬೇಡಿಕೊಳ್ಳುತ್ತಾರೆ.
ಆಗ ಮಳೆ ಆಗುತ್ತದೆ ಎಂಬ ನಂಬಿಕೆಯಲ್ಲಿ ಈ ರೀತಿಯ ವಿಶೇಷ ಸಂತೆ ಆರಂಭವಾಯಿತಂತೆ. ಅಂದಿನಿಂದ ಇಂದಿನವರೆಗೂ ಈ ರೀತಿ ದೇವಿ ಮುಂದೆ ಸಂತೆ ನಡೆಯುತ್ತಿದೆ. ಆ ದೇವಿ ಆ ರೀತಿಯ ಸಂತೆ ಮಾಡಿದಾಗ ಮಳೆ ತರಿಸಿದ್ದೂ ಉಂಟು. ಇದು ಅಲ್ಲವೆ ಅಚ್ಚರಿ ಅಂದ್ರೆ.