ತ್ರಿವಳಿ ಸ್ಫೋಟ: ಈ ಅವಳಿಯ ಹಾವಳಿ ಇರಬಹುದೇ?

ಮತ್ತೊಂದು ದೂರದ ಸಾಧ್ಯತೆ ಎಂದರೆ ಪಾಕ್ ನಲ್ಲಿ ನೆಲೆಸಿರುವ, ಅಲ್ ಖೈದಾದತ್ತ ಸಹಾನುಭೂತಿ ಹೊಂದಿರುವ ಲಷ್ಕರೆ ತಯ್ಬಾ ಪ್ರತ್ಯೇಕತಾವಾದಿ ಸಂಘಟನೆಯತ್ತಲೂ ಸಂಶಯ ಸುಳಿದಾಡುತ್ತದೆ. 2008 ಮುಂಬೈ ಸ್ಫೋಟಕ್ಕೆ ಇದೇ LeT ಕಾರಣವೆಂಬುದು ಜಗಜ್ಜಾಹೀರು ಆದ ಸಂಗತಿ.
ಜಾಗತಿಕ ಬೇಹುಗಾರಿಕೆ ಸಂಸ್ಥೆಯಾದ ಸ್ಟ್ರಾಟಫಾರ್ ಪ್ರಕಾರ ಇಂಡಿಯನ್ ಮುಜಾಹಿದ್ದೀನ್ ಅಲ್ಪ ಮತ್ತು ಸಾಧಾರಣ ಪ್ರಮಾಣದ ಸ್ಫೋಟಕ ಕೃತ್ಯಗಳನ್ನು ಕೈಗೊಳ್ಳಬಲ್ಲ ಸಾಮರ್ಥ್ಯ ಹೊಂದಿದೆ ಅಷ್ಟೆ. ಇದರ ಸದಸ್ಯರು ಸ್ಥಳೀಯ ಮುಸ್ಲಿಮರು. ನೆರೆಯ ಪಾಕಿಸ್ತಾನ ಮತ್ತು ಬಾಂಗ್ಲಾದ ಭಯೋತ್ಪಾದಕ ಸಂಘಟನೆಗಳಿಂದ ಇವರಿಗೆ ತರಬೇತಿ ಮತ್ತು ಬೆಂಬಲ ಸಿಗುತ್ತಿದೆ. ಬಾಂಗ್ಲಾದ ಹರ್ಕತ್ ಉಲ್ ಮುಜಾಹಿದ್ದೀನ್ ಅಲ್ ಇಸ್ಲಾಮಿ ಸಂಘಟನೆಯ ಸದಸ್ಯರೂ ಇದರಲ್ಲಿ ಸಕ್ರಿಯರಾಗಿದ್ದಾರೆ.
2007ರಲ್ಲಿ ಬಾಂಬ್ ಸ್ಫೋಟಗಳ ಹಾವಳಿ ದಾಂಗುಡಿಯಿಟ್ಟಾಗ ಮೊದಲ ಬಾರಿಗೆ ಈ ಸಂಘಟನೆಯ ಹೆಸರು ಕೇಳಿಬಂತು. ಆನಂತರ ಜೈಪುರ, ಬೆಂಗಳೂರು, ಅಹಮದಾಬಾದ್ ಮತ್ತು ನವದೆಹಲಿಯಲ್ಲಿ ಸಂಭವಿಸಿದ ಸ್ಫೋಟಗಳಿಗೆ ಈ ಸಂಘಟನೆಯೇ ಹೊಣೆಹೊತ್ತಿತ್ತು. ತಾಜಾ ಆಗಿ ಇದು 2010 ರಲ್ಲಿ ಪುಣೆಯಲ್ಲಿ ಭಯೋತ್ಪಾದಕ ಕೃತ್ಯವೆಸಗಿತ್ತು.
ಇನ್ನು, ಲಷ್ಕರೆ ತಯ್ಬಾ ದಕ್ಷಿಣ ಏಷ್ಯಾದಲ್ಲಿಯೇ ಅತಿ ದೊಡ್ಡ ಭಯೋತ್ಪಾದಕ ಸಂಘಟನೆಯಾಗಿದೆ. ಕಾಶ್ಮೀರದಲ್ಲಿ ಭಾರತದ ವಿರುದ್ಧ ಜಗಳಕ್ಕಿಳಿಯಲು ಪಾಕ್ ಸೇನೆಯೇ ಈ ಸಂಘಟನೆಗೆ ಕುಮ್ಮಕ್ಕು ನೀಡುತ್ತದೆ. 2001ರಲ್ಲಿ ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದು ಇದೇ ಪಾಕ್ ಪ್ರೇರಿತ ಉಗ್ರರು ಎಂಬುದು ಭಾರತಕ್ಕೆ ಮನವರಿಕೆಯಾಗುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಈ ಭೀತಿಯ ಹಿನ್ನೆಲೆಯಲ್ಲಿ ಮುಂಬೈ ಸ್ಫೋಟದ ನಂತರ ಇದು ತಣ್ಣಗಾಗಿದೆ. ಆದರೂ ವಿಭಿನ್ನ ಹೆಸರುಗಳಲ್ಲಿ ಇದು ಸಕ್ರಿಯವಾಗಿದೆ ಎಂದು ಅಮೆರಿಕವೇ ಹೇಳಿದೆ.












Click it and Unblock the Notifications