ಅನಂತ ದೇಗುಲದ ಬಿ ಉಗ್ರಾಣ ಸದ್ಯಕ್ಕೆ ತೆರೆಯೊಲ್ಲ

ಭದ್ರತೆಯ ದೃಷ್ಟಿಯಿಂದ ಅನಂತ ಪದ್ಮನಾಭ ದೇಗುಲದ ನೆಲಮಾಳಿಗೆ 6ನೇ ಉಗ್ರಾಣ ತೆರೆಯುವುದನ್ನು ಸುಪ್ರೀಂಕೋರ್ಟ್ ತಾತ್ಕಾಲಿಕವಾಗಿ ಮುಂದೂಡಿದೆ. ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದು, ಅಂದು 6ನೇ ಉಗ್ರಾಣ ತೆರೆಯಬೇಕೋ, ಬೇಡವೋ? ಎಂಬುದರ ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ಕೋರ್ಟ್ ಹೇಳಿದೆ.
ದೇಗುಲದ ತಳಭಾಗದಲ್ಲಿರುವ 6 ಉಗ್ರಾಣಗಳ ಪೈಕಿ 'ಬಿ' ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಉಗ್ರಾಣಗಳನ್ನು ತೆರೆಯಲಾಗಿದೆ. ಈ ಪೈಕಿ 'ಎ' ಉಗ್ರಾಣದಲ್ಲಿ 1 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಸಂಪತ್ತು ದೊರಕಿದೆ. ಇದು ಅಂದಾಜು ಮಾತ್ರ. ಇದರ ನಿಖರವಾದ ಬೆಲೆಯನ್ನೂ ಅಂದಾಜಿಸಲಾಗಿಲ್ಲ. ಅಲ್ಲದೆ ಈಗಾಗಲೇ ಹೊರತೆಗೆಯಲಾಗಿರುವ ಸಂಪತ್ತನ್ನು ಎಲ್ಲಿ ಇಡಬೇಕೆಂಬ ಬಗ್ಗೆಯೂ ತೀರ್ಮಾನ ಹೊರಬಿದಿಲ್ಲ.
ಹೀಗಾಗಿ ಬಿ ಉಗ್ರಾಣ ತೆರೆಯುವ ಬಗ್ಗೆ ನಿರ್ಧಾರ ಮುಂದೂಡಲಾಗಿತ್ತು. ಈ ನಡುವೆ ಬಿ ಉಗ್ರಾಣ ತೆಗೆಯಲು ತಜ್ಞರ ಅವಶ್ಯಕತೆ ಇದೆ ಎಂದು ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿ ಹೇಳಿತ್ತು. ಇದರ ಜೊತೆಗೆ ಈ ಉಗ್ರಾಣ ತೆರೆದರೆ ಅದು ಅನಿಷ್ಟವನ್ನು ತರಲಿದೆ ಎಂದು ದೇಗುಲದ ಉಸ್ತುವಾರಿ ಹೊತ್ತಿರುವ ರಾಜಮನೆತನದ ಸದಸ್ಯರು ಎಚ್ಚರಿಸಿದ್ದರು.
ಹೀಗಾಗಿ 'ಬಿ' ಕೋಣೆಯನ್ನು ತೆರೆಯುವ ನಿರ್ಧಾರವನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು. ಶುಕ್ರವಾರ ಇಲ್ಲಿ ಸಭೆ ಸೇರಲಿರುವ ಸಮಿತಿಯ ಸದಸ್ಯರು ಮುಂದಿರುವ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.












Click it and Unblock the Notifications