Get Updates
Get notified of breaking news, exclusive insights, and must-see stories!

ಕಾನೂನು ಪದವೀಧರನಿಂದ ಅಪ್ರಾಪ್ತಳ ಮದುವೆ: ಪೊಲೀಸರ ಕೊಕ್ಕೆ

Bijapur- Child marriage
ಬಿಜಾಪುರ, ಜೂನ್ 26: ಅವ ಕಾನೂನು ಪದವೀಧರ. ಆದರೆ ಆ ಯುವಕನಿಗೆ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮಾದುವೆಯಾಗುವುದು ಕಾನೂನುಬಾಹಿರ ಎಂಬುದರ ಬಗ್ಗೆ ಪರಿವೆಯೇ ಇಲ್ಲ. ಕುತೂಹಲದ ಸಂಗತಿಯೆಂದರೆ ಪುತ್ರ ವ್ಯಾಮೋಹದಲ್ಲಿ ಅವರಪ್ಪ, ಪ್ರಕಾಂಡ ಕಾನೂನು ಪಂಡಿತನಿಗೂ ಅನ್ನ ಕೊಡುವ ಕಾನೂನಿನ ಬಗ್ಗೆ ಎಳ್ಳಷ್ಟೂ ಗೌರವವಿಲ್ಲ.

ಸಿನಿಮೀಯ ಘಟನಾವಳಿಯ ವಿವರ ಹೀಗಿದೆ: ಇಲ್ಲಿಯ ದರಬಾರ ಗಲ್ಲಿಯ ಖ್ಯಾತ ವಕೀಲ ಬಿ.ವಿ. ಪಾಟೀಲ ಅವರ ಪುತ್ರ ಶ್ರೀನಿವಾಸ ಬಸವಂತರಾವ್ ಪಾಟೀಲನಿಗೆ ತಾಳಿಕೋಟೆಯ 17 ವರ್ಷದ ಯುವತಿಯೊಂದಿಗೆ ಶನಿವಾರ ಮದುವೆ ನಿಗದಿಯಾಗಿತ್ತು. ವರನಿಗೆ ವಯಸ್ಸು 27. ವೃತ್ತಿಯಲ್ಲಿ ಆತನೂ ವಕೀಲನೇ!

ಈ ವಿವಾಹ ಇಲ್ಲಿಯ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿತ್ತು. ಮದುವೆಗೆ ಅದ್ದೂರಿ ತಯಾರಿ ಮಾಡಲಾಗಿತ್ತು. ಸಾವಿರಾರು ಜನರಿಗೆ ಆಮಂತ್ರಣ ನೀಡಿ, ಬಗೆ ಬಗೆಯ ಅಡುಗೆ ತಯಾರಿಸಲಾಗಿತ್ತು.

ಆದರೆ ವಿವಾಹ ತಡೆಯಲು ಅಧಿಕಾರಿಗಳು ಬೆನ್ನುಬಿದ್ದಿರುವುದನ್ನು ಅರಿತ ಪಾಲಕರು, ಮಧ್ಯಾಹ್ನದವರೆಗೂ ಕಣ್ಣಾಮುಚ್ಚಾಲೆ ಆಡಿ, ಅಧಿಕಾರಿಗಳಿಗೇ ಚಳ್ಳೆಹಣ್ಣು ತಿನ್ನಿಸಲು ಯತ್ನಿಸಿದರು. ಕೊನೆಗೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ವಧು-ವರರನ್ನು ಹಾಜರುಪಡಿಸಿ ಮುಚ್ಚಳಿಕೆ ಪತ್ರ ಬರೆದುಕೊಟ್ಟರು.

ಮಹಿಳಾ ಸಹಾಯವಾಣಿ : 'ಈ ಬಾಲ್ಯ ವಿವಾಹ ನಡೆಯುವ ವಿಷಯ ನಮಗೆ ಮೊದಲೇ ತಿಳಿದಿತ್ತು. ವಧು-ವರರ ಪಾಲಕರನ್ನು ಸಂಪರ್ಕಿಸಿ ತಿಳಿವಳಿಕೆ ನೀಡಿ, ವಧುವಿನ ಪಾಲಕರಿಂದ ಮುಚ್ಚಳಿಕೆ ಪತ್ರವನ್ನೂ ಬರೆಸಿಕೊಂಡಿದ್ದೆವು. ಆದರೂ, ಅವರು ಮದುವೆ ಮಾಡಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಕಲ್ಯಾಣ ಮಂಟಪದ ವೇದಿಕೆಯ ಮೇಲೆ ವಧು-ವರರ ಹೆಸರನ್ನು ಬರೆಸಿರಲಿಲ್ಲ' ಎಂದು ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಕೆ.ಎನ್. ಮೇಟಿ ಹೇಳಿದರು.

ಈ ವಿಷಯ ತಿಳಿದ ತಹಶೀಲ್ದಾರ್ ರಾಜಶ್ರೀ ಜೈನಾಪುರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ಸುರೇಖಾ ವಿಜಯಪ್ರಕಾಶ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಎಸ್. ಬೆಟಗೇರಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಜೆ.ಬಿ. ಚವ್ಹಾಣ, ಪಿಎಸ್‌ಐ ಶಕೀಲಾ ಪಿಂಜಾರ, ಸ್ವಯಂ ಸೇವಾ ಸಂಸ್ಥೆಗಳ ಮುಖಂಡರಾದ ಕೆ.ಎನ್. ಮೇಟಿ, ಶಾಂತಾಬಾಯಿ ಮಮದಾಪುರ, ನೀಲಮ್ಮ ಮಠಪತಿ, ಬಿ.ಎಸ್. ನವಲಿ, ಸಾಂತ್ವನ ಕೇಂದ್ರದ ಸುಜಾತಾ ದೇವಮಾನೆ, ಸುಜಾತಾ ಕಲಬುರ್ಗಿ, ರೇಣುಕಾ ಸಜ್ಜನ, ಚನ್ನಮ್ಮ ಹೂಗಾರ ಇತರರು ಬೆಳಿಗ್ಗೆಯೇ ಕಲ್ಯಾಣ ಮಂಟಪಕ್ಕೆ ದೌಡಾಯಿಸಿದರು. ಆದರೆ ಅಲ್ಲಿಗೆ ವಧು-ವರರು ಇನ್ನೂ ಬಂದಿರಲಿಲ್ಲ.

ಆದರೂ ಅಲ್ಲಿದ್ದವರನ್ನೆಲ್ಲ ಹೊರ ಹಾಕಿ ಕಲ್ಯಾಣ ಮಂಟಪಕ್ಕೆ ಬೀಗ ಹಾಕಿ ತಹಶೀಲ್ದಾರರು ಬಾಗಿಲಲ್ಲಿ ಕುಳಿತರು. ವಧು-ವರರನ್ನು ಕರೆತಂದು ಹಾಜರುಪಡಿಸುವಂತೆ ಸೂಚಿಸಿದರು. ಆಗಲೂ, ವಧು-ವರರು ಅತ್ತ ಸುಳಿಯಲೇ ಇಲ್ಲ. ಸಂಬಂಧಿಕರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲಿಲ್ಲ. ವಧು-ವರರನ್ನು ಕರೆತರಲು ಹೋದ ಪೊಲೀಸರೂ ಬರಿಗೈಲಿ ವಾಪಸ್ಸಾದರು.

ಕೊನೆಗೆ ಪಿಎಸ್‌ಐ ಪಿಂಜಾರ ಹೋಗಿ ವಧುವಿನ ತಂದೆಯನ್ನು ಕರೆತಂದರು. 'ನಮ್ಮ ಮಗಳು ಹೆದರಿ ಕೊಂಡಿದ್ದಾಳೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ. ಆಸ್ಪತ್ರೆಗೆ ದಾಖಲಿಸಿದ್ದೇವೆ' ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ವಧು-ವರರ ಕಡೆಯವರು ತಹಶೀಲ್ದಾರರೊಂದಿಗೆ ವಾಗ್ವಾದವನ್ನೂ ನಡೆಸಿದರು.

ವಧು-ವರರಿಬ್ಬರೂ ದರಬಾರ ಗಲ್ಲಿಯ ಮನೆಯಲ್ಲಿದ್ದಾರೆ ಎಂಬ ಮಾಹಿತಿ ಆಧರಿಸಿ ತಹಶೀಲ್ದಾರ್ ಅಲ್ಲಿಗೆ ದೌಡಾಯಿಸಿದರು. ಅಲ್ಲಿಯೂ ಅವರನ್ನು ಭೇಟಿ ಮಾಡಿಸಲಿಲ್ಲ. ಇದರಿಂದ ಕೆರಳಿದ ತಹಶೀಲ್ದಾರರು, 'ತಕ್ಷಣ ವಧು-ವರರಿಬ್ಬರನ್ನೂ ಹಾಜರುಪಡಿಸಿ. ಇಲ್ಲವೆ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ' ಎಂದು ತಾಕೀತು ಮಾಡಿದರು.

ಆಗ ಪಾಲಕರು, ಎಸ್ಪಿ ಕಚೇರಿಗೆ ತಮ್ಮ ಮಕ್ಕಳನ್ನು ಕರೆತರುವುದಾಗಿ ಹೇಳಿದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಫ್.ಎ. ಟ್ರಾಸ್ಗರ್ ಅವರ ಕಚೇರಿಯಲ್ಲಿ ವಧು-ವರರನ್ನು ಹಾಜರುಪಡಿಸಿ, 'ನಾವು ಮದುವೆ ಮಾಡಿಕೊಂಡಿಲ್ಲ. ವಧುವಿಗೆ 18 ವರ್ಷ ಆದ ನಂತರ ಮದುವೆ ಮಾಡುತ್ತೇವೆ' ಎಂಬ ಮುಚ್ಚಳಿಕೆಯನ್ನು ಬರೆದುಕೊಟ್ಟರು ಎಂದು ಅಧಿಕಾರಿಗಳು ತಿಳಿಸಿದರು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+