4 ಹೆಂಡಿರ ಶಿಕ್ಷಕನಿಗೆ ಕೊನೆಗೂ 'ಮಾವನ ಮನೆ' ಆತಿಥ್ಯ!

ಕುಂದಗೋಳ ತಾಲೂಕಿನ ಹರ್ಲಾಪುರ ಗ್ರಾಮದ ಪ್ರಕಾಶ ಬಸವಣ್ಣೆಪ್ಪ ಅಂಗಡಿ (40) ಕಂಬಿ ಎಣಿಸುತ್ತಿರುವ ವ್ಯಕ್ತಿ. ಬಿ.ಎಸ್ಸಿ, ಬಿ.ಇಡಿ ಪದವೀಧರನಾದ ಈತ ಸದ್ಯ ರೋಣ ತಾಲೂಕ ಬೆಳವಣಿಕಿಯ ಶ್ರೀ ವೀರಭದ್ರೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಶಿಕ್ಷಕ.
ಅಮಾಯಕ ಹೆಣ್ಣುಮಕ್ಕಳನ್ನು ಮದುವೆಯಾಗಿ ಅವರಿಗೆ ಚಿತ್ರಹಿಂಸೆ ನೀಡುವುದು ಮಾತ್ರವಲ್ಲ, ತನಗೆ ಆಗದವರ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸಿ ಅವರಿಂದ ಹಣ ಕೀಳುವ ದಂಧೆಯನ್ನೂ ಮಾಡುತ್ತಿದ್ದ ಎನ್ನಲಾಗಿದೆ. ಮೊಕದ್ದಮೆಯೊಂದರ ವಿಚಾರಣೆಗೆ ಹಾಜರಾಗಲು ಗುರುವಾರ ರೋಣ ನ್ಯಾಯಾಲಯಕ್ಕೆ ಬಂದಿದ್ದ ಪ್ರಕಾಶ ವಂಚನೆಗೆ ಒಳಗಾಗಿದ್ದ ಮಹಿಳೆಯರ ಗ್ರಾಮದವರ ಕೈಗೆ ಸಿಕ್ಕಿ ಬಿದ್ದ.
ಪ್ರಕಾಶ ಮೊದಲು ಮದುವೆಯಾಗಿದ್ದು ಬ್ಯಾಡಗಿ ತಾಲೂಕು ಚಿಕ್ಕಬಾಸೂರಿನ ಶಾಂತಪ್ಪ ಲಕ್ಷ್ಮೇಶ್ವರ ಹಾಗೂ ಸುಶೀಲಾ ದಂಪತಿಯ ಏಕೈಕ ಪುತ್ರಿ ಪ್ರತಿಭಾಳನ್ನು. 2003ರಲ್ಲಿ ಈ ವಿವಾಹ ನಡೆದಿತ್ತು. ವಿವಾಹದ ಸಮಯದಲ್ಲಿ ಒಂದು ಲಕ್ಷ ರೂ. ನಗದು, 8 ತೊಲ ಬಂಗಾರ ಹಾಗೂ 40 ತೊಲ ಬೆಳ್ಳಿಯನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು.
ಸರಿ. ಪ್ರತಿಭಾಗೆ ಚಿತ್ರಹಿಂಸೆ ನೀಡಿ ಅವಳಿಂದ ದೂರವಾದ. ನಂತರ ಪ್ರಕಾಶ ಕಣ್ಣು ಹಾಕಿದ್ದು ನವಲಗುಂದ ತಾಲೂಕಿನ ನಾಯಕನೂರಿನ ಯಲ್ಲಪ್ಪ ಜಾವೂರ ಪುತ್ರಿ ಮಹಾದೇವಿ ಎಂಬಾಕೆಯ ಮೇಲೆ. ನನ್ನ ಮೊದಲ ಹೆಂಡತಿ ತೀರಿಕೊಂಡಿದ್ದಾಳೆ. ಆದ್ದರಿಂದ ಮರು ಮದುವೆ ಆಗುತ್ತಿರುವೆ ಎಂದು ನಂಬಿಸಿ ಬಾದಾಮಿ ಗುತ್ತಿ ಬಸವೇಶ್ವರ ದೇವಾಲಯದಲ್ಲಿ 2007ರಲ್ಲಿ ಇವಳನ್ನು ಮದುವೆ ಮಾಡಿಕೊಂಡ ಪ್ರಕಾಶ.
ಈತನ ಮಾತು ನಂಬಿ ಮಹಾದೇವಿ ಪ್ರಕಾಶನ ಕೈಹಿಡಿದಿದ್ದಳು. ನಂತರ ಇವರಿಗೆ ಗಂಡುಮಗುವೂ ಜನಿಸಿತು. ಈಗ ಅದಕ್ಕೆ ಮೂರು ವರ್ಷ. ಈ ಮಗು ನನ್ನದಲ್ಲ, ಡಿಎನ್ಎ ಪರೀಕ್ಷೆ ಮಾಡಿಸಬೇಕು ಎಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಬೆದರಿಸುತ್ತಿದ್ದ. ಪ್ರತಿಭಾಗೆ ನೀಡುತ್ತಿದ್ದ ಹಿಂಸೆಯನ್ನೇ ಇಲ್ಲಿಯೂ ಪುನರಾವರ್ತಿಸಿದ.
ಬಸವರಾಜ, ಬಸೆಟ್ಟಪ್ಪ ಎಂದೆಲ್ಲ ಹೆಸರು ಬದಲಾಯಿಸಿಕೊಂಡಿರುವ ಪ್ರಕಾಶ, ಲಕ್ಷ್ಮೇಶ್ವರ ಹಾಗೂ ನವಲಗುಂದ ತಾಲೂಕಿನ ನಾವಳ್ಳಿಯ ಇನ್ನೂ ಇಬ್ಬರನ್ನು ಮದುವೆಯಾಗಿದ್ದಾನೆ ಎಂದು ವಂಚನೆಗೊಳಗಾದ ಮೊದಲ ಹಾಗೂ ಎರಡನೇ ಪತ್ನಿಯರು ಹೇಳುತ್ತಾರೆ. ಮೊದಲ ಹೆಂಡತಿ ಬದುಕಿದ್ದಾಗಲೇ ಎರಡನೇ ಮದುವೆಯಾದ ಹಾಗೂ ಕಿರುಕುಳ ನೀಡಿದ ಕಾರಣದಿಂದ ಮಹಾದೇವಿ ನೀಡಿರುವ ದೂರನ್ನು ನವಲಗುಂದ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗುವುದು ಎಂದು ಡಿವೈ.ಎಸ್ಪಿ ಎ.ಬಿ. ಬಸರಿ ತಿಳಿಸಿದ್ದಾರೆ.












Click it and Unblock the Notifications