ಟ್ವಿಟ್ ಮಾಡುತ್ತ ಅಭಿಮಾನಿಗಳಿಗೆ ಬೋರ್ ಹೊಡೆಸಬೇಡಿ
ಇದು ಸಾಮಾಜಿಕ ಮಾಧ್ಯಮ ಯುಗ. ಇಲ್ಲಿ ಟ್ವಿಟ್ಟರ್ ಫೇಸ್ ಬುಕ್ ಮೂಲಕ ಕ್ಷಣಕ್ಷಣಕ್ಕೂ ಹೊಸ ಹೊಸ ಸುದ್ಧಿಗಳನ್ನು ಪಡೆದುಕೊಳ್ಳಬಹುದು. ಸಚಿನ್ ತೆಂಡೂಲ್ಕರ್, ಕನ್ನಡ ಚಿತ್ರನಟಿ ದಿವ್ಯಸ್ಪಂದನ ಅಥವಾ ರಮ್ಯ, ರಾಜಕಾರಣಿ ಕುಮಾರಸ್ವಾಮಿ, ನರೇಂದ್ರ ಮೋದಿ, ಸುಷ್ಮಾ ಸ್ವರಾಜ್, ಪುನಿತ್ ರಾಜ್ ಕುಮಾರ್, ಐಶ್ವರ್ಯ ರೈ, ಶೋಬಾಕರಂದ್ಲಾಜೆ ಹೀಗೆ ಎಲ್ಲರನ್ನೂ ಅಭಿಮಾನಿಗಳು ಇಂತಹ ತಾಣಗಳಲ್ಲಿ ಅನುಸರಿಸಬಹುದು. [ಓದಿ: ಟ್ವಿಟ್ ಕನ್ನಡಕ್ಕೆ ಸ್ವಾಗತ ]
ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಬಹುದಾದರೂ ನಿಕಟತೆ ಹೆಚ್ಚಾದಷ್ಟು ಅಭಿಮಾನಿಗಳಿಗೆ ಬೋರ್ ಹೊಡೆಸುವ ಸಾಧ್ಯತೆ ಹೆಚ್ಚು ಎಂದು ಮ್ಯೂಸಿಕ್ ಕನ್ಶೂಮರ್ ರಿಸರ್ಚ್ ಕಂಪನಿ ಬೆಹೂರಾ ಮೀಡಿಯಾ ಹೇಳಿದೆ. ಸೆಲೆಬ್ರೆಟಿಗಳು ಅಭಿಮಾನಿಗಳಿಗೆ ತೀರಾ ಅತಿ ಎನಿಸುವಷ್ಟು ಅಪ್ ಡೇಟ್ ನೀಡುತ್ತಿರುವುದು ಒಳ್ಳೆಯದಲ್ಲ. ಇದರಿಂದ ನಿಮ್ಮ ಕರಿಯರ್ ಗೆ ಅಪಾಯ ಎಂದು ಅಧ್ಯಯನ ಹೇಳಿದೆ.
ಅಮೆರಿಕದ ಜನಪ್ರಿಯ ಗಾಯಕ ಕೇಟಿ ಪೆರ್ರಿ ಸೇರಿದಂತೆ ಹಲವು ಸೆಲೆಬ್ರಿಟಿಗಳನ್ನು ಸಮೀಕ್ಷೆ ನಡೆಸಲಾಯಿತು. ಇವರೆಲ್ಲರೂ ದಿನನಿತ್ಯ ತಮ್ಮ ಅಭಿಮಾನಿಗಳಿಗೆ ತಾಜಾ ಮಾಹಿತಿಯನ್ನು ನೀಡುತ್ತಿರುತ್ತಾರೆ. ಹಲವು ಸುತ್ತಿನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ದಿನಕಳೆದಂತೆ ಅಭಿಮಾನಿಗಳು ತಮ್ಮ ಸೆಲೆಬ್ರಿಟಿಗಳ ಕುರಿತು ಆಸಕ್ತಿ ಕಳೆದುಕೊಳ್ಳುತ್ತ ಬರುವುದು ತಿಳಿದುಬಂದಿದೆ.
ಜನಪ್ರಿಯ ಗಾಯಕರಿಗಾಗಿ ಅಭಿಮಾನಿಗಳು ಎಷ್ಟು ಹೊತ್ತಾದರೂ ಕಾಯುವುದನ್ನು ಇಷ್ಟಪಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇವರೆಲ್ಲರೂ ತಮ್ಮ ಅಭಿಮಾನಿಗಳಿಗೆ ಕ್ಷಣಕ್ಷಣಕ್ಕೆ ಟ್ವಿಟ್ಟರ್ ಇತ್ಯಾದಿಗಳಲ್ಲಿ ಅಪ್ ಡೇಟ್ ನೀಡುತ್ತಿದ್ದಾರೆ. ತಮ್ಮ ಅಭಿಮಾನಿಗಳಿಗೆ ತಮ್ಮ ಬಗ್ಗೆ ಬೋರ್ ಹೊಡೆಸುವಷ್ಟು ಮಾಹಿತಿ ನೀಡುತ್ತಿದ್ದರೆ ಅವರ ಕರಿಯರ್ ಸರ್ವನಾಶವಾಗುವುದು ಖಂಡಿತ! ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ.
ಆದರೆ ಇಂತಹ ಸಾಮಾಜಿಕ ಜಾಲತಾಣಗಳು ಜನರಿಗೆ ಶೀಘ್ರದಲ್ಲಿ ಸುದ್ದಿಗಳನ್ನು ತಲುಪಿಸಲು ನೆರವಾಗುತ್ತದೆ ಎಂದು ಸಮೀಕ್ಷೆ ಹೇಳಿದೆ. ಟ್ವಿಟ್ಟರ್ , ಫೇಸ್ ಬುಕ್ ಮೂಲಕ ದಟ್ಸ್ ಕನ್ನಡದ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ನೀವು ಪಡೆಯಲು ಸಾಧ್ಯವಾಗಿರುವುದು ಕೂಡ ಸೋಷಿಯಲ್ ನೆಟ್ ವರ್ಕ್ ತಾಣಗಳ ಕೊಡುಗೆಯಾಗಿದೆ.