ಸ್ಪೀಕರ್ ಕಡೆಗೆ ದೇವೇಗೌಡ ಕೆಂಗಣ್ಣು, ಕುಮಾರ ದೆಹಲಿಗೆ
ನಿನ್ನೆ ಉಪಚುನಾವಣೆಯ ಗೆಲುವಿನ ಸಂತೋಷದಲ್ಲಿದ್ದ ಬಿಜೆಪಿಗೆ ಸುಪ್ರಿಂ ಕೋರ್ಟ್ ತೀರ್ಪು ಹೊಡೆತ ನೀಡಿತ್ತು. ಬಿಜೆಪಿಯ ಹನ್ನೊಂದು ಮತ್ತು ಪಕ್ಷೇತರ ಐದು ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಕೆ.ಜಿ. ಬೋಪಯ್ಯ ಹೊರಡಿಸಿದ್ದ ಆದೇಶವನ್ನು ಸುಪ್ರಿಂ ಕೋರ್ಟ್ ರದ್ದುಗೊಳಿಸಿತ್ತು. ರಾಜ್ಯಪಾಲರು ನಿಗದಿಪಡಿಸಿದ ಕಾಲದೊಳಗೆ ಬಹುಮತ ಸಾಬೀತುಪಡಿಸಲು ಅನುಕೂಲವಾಗುವಂತೆ ಅವಸರದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಮತ್ತು ಸಂವಿಧಾನವನ್ನು ಉಲ್ಲಂಘಿಸಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಈಗ ನ್ಯಾಯಸಿಕ್ಕ ಶಾಸಕರನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆಯೇ? ಅಥವಾ ಜೆಡಿಎಸ್ ಕಾಂಗ್ರೆಸ್ ಪಕ್ಷಗಳು ಸೆಳೆಯಲಿವೆಯೇ ಎಂದು ಕಾದುನೋಡಬೇಕಿದೆ. ಇದರೊಂದಿಗೆ ಈಗಾಗಲೇ ಎಚ್ ಡಿ ಕುಮಾರಸ್ವಾಮಿ ದೆಹಲಿಗೆ ದೌಡಾಯಿಸಿದ್ದು ಸಾಕಷ್ಟು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.
ಸ್ಪೀಕರ್ ಕೆಳಗಿಳಿಯಲಿ : ಇದರೊಂದಿಗೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡರು ಸ್ಪೀಕರ್ ಕೆ.ಜಿ. ಬೋಪಯ್ಯ ವಿರುದ್ಧ ಗುಡುಗಿದ್ದಾರೆ. ಅವರಿಗೆ ಆ ಸ್ಥಾನದಲ್ಲಿ ಮುಂದುವರೆಯುವ ನೈತಿಕ ಹಕ್ಕಿಲ್ಲ ಎಂದಿದ್ದಾರೆ. ಅವರು ರಾಜಿನಾಮೆ ಕೊಡುವ ಮೂಲಕ ಸ್ಪೀಕರ್ ಸ್ಥಾನದ ಘನತೆ ಕಾಪಾಡುವಂತೆ ಆಗ್ರಹಿಸಿದ್ದಾರೆ.