ಮೇ 15ರೊಳಗೆ ಎಸ್ಎಸ್ಎಲ್ ಸಿ, ಪಿಯುಸಿ ಫಲಿತಾಂಶ

ಎರಡನೇ ಪಿಯುಸಿ ಪರೀಕ್ಷೆಗೆ 6.24 ಲಕ್ಷ ಮತ್ತು ಎಸ್ಎಸ್ಎಲ್ ಸಿ ಪರೀಕ್ಷೆಗೆ ಕರ್ನಾಟಕದ 8.73 ಲಕ್ಷ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕುಳಿತುಕೊಂಡಿದ್ದಾರೆ. ದಿನಾಂಕ ನಿಗದಿಪಡಿಸದಿದ್ದರೂ ಮೇ 15ರೊಳಗೆ ಎರಡೂ ಪರೀಕ್ಷೆಗಳ ಫಲಿತಾಂಶ ಬರುವುದ ಖಂಡಿತ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಶ್ವಾಸದಿಂದ ಹೇಳಿದರು.
ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಏಪ್ರಿಲ್ 29ರಂದು ಮುಗಿದಿದೆ. ಆದರೆ, ಎಸ್ಎಸ್ಎಲ್ ಸಿ ಯ ಪ್ರಥಮ ಭಾಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಇನ್ನೂ ಮುಗಿದಿಲ್ಲ. ಮೇ 2ರಂದು ಮೌಲ್ಯಮಾಪನ ಮುಗಿಯುತ್ತದೆ. ಉಳಿದೆಲ್ಲ ಪತ್ರಿಕೆಗಳ ಮೌಲ್ಯಮಾಪನ ಈಗಾಗಲೆ ಮುಗಿದಿದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕ ಡಿ. ವೆಂಕಟೇಶಯ್ಯ ಅವರು ನುಡಿದರು.
ಏಪ್ರಿಲ್ 14ರಂದು ಶಿವಮೊಗ್ಗದಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಮೈಸೂರಿನ 13 ಪರೀಕ್ಷಾ ಕೇಂದ್ರದಲ್ಲಿ ಬರೆಯಲಾಗಿದ್ದ ಹಿಂದಿ ಉತ್ತರ ಪತ್ರಿಕೆಗಳು ಆಹುತಿಯಾಗಿದ್ದವು. ನಂತರ ಏಪ್ರಿಲ್ 27ರಂದು ಮರುಪರೀಕ್ಷೆ ನಡೆಸಲಾಗಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ರಾಜಾಜಿನಗರದಲ್ಲಿ ಇಡಲಾಗಿದ್ದ ಉತ್ತರ ಪತ್ರಿಕೆಗಳು ನೆಂದಿದ್ದವು.












Click it and Unblock the Notifications