ಇನ್ನು ಉಪವಾಸ ಮಾಡಬೇಡಿ: ಅಣ್ಣಾಗೆ ಕಟ್ಟಾಜ್ಞೆ

ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಅವರನ್ನು ಅಧಿಕ ರಕ್ತದೊತ್ತಡ ಮತ್ತು ಮೊಣಕಾಲು ನೋವು ತೀವ್ರವಾಗಿ ಬಾಧಿಸುತ್ತಿದೆ. 70ರ ಗಡಿ ದಾಟಿರುವ ಅಣ್ಣಾಗೆ ಇದು ವಯೋಸಹಜವಾದರೂ ಇತ್ತೀಚೆಗೆ ನಾಲ್ಕು ದಿನಗಳ ಕಾಲ ದೇಶಕ್ಕಾಗಿ ಉಪವಾಸ ಮಾಡಿದ್ದು ಅವರ ಆರೋಗ್ಯಕ್ಕೆ ದುಬಾರಿಯಾಗಿ ಪರಿಣಮಿಸಿದೆ. ಆದ್ದರಿಂದ ಇನ್ನು ಮುಂದೆ ಕಡ್ಡಾಯವಾಗಿ ಉಪವಾಸ ಮಾಡುವಂತಿಲ್ಲ.
ಮೊಣಕಾಲು ನೋವು ತೀವ್ರವಾಗಿ ಕಾಣಿಸಿಕೊಂಡ ಬಳಿಕ ಅಣ್ಣಾ ಪುಣೆಯ ಸಂಚೇತಿ ಇನ್ಸ್ ಟಿಟ್ಯೂಟ್ ಆಫ್ ಆರ್ಥೊಪೆಡಿಕ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 40 ವರ್ಷ ದಾಟುತ್ತಿದ್ದಂತೆ ಮೂಳೆ ಸವೆತ ಸಾಮಾನ್ಯ. ಅಣ್ಣಾ ಅನೇಕ ವರ್ಷಗಳಿಂದ ಚಿಕಿತ್ಸೆಗೆಂದು ಇದೇ ಆಸ್ಪತ್ರೆಗೆ ಬರುತ್ತಿರುತ್ತಾರೆ. ಆದರೆ ಈ ಬಾರಿ ಉಪವಾಸ ಮಾಡಿರುವುದು ಅವರ ಆರೋಗ್ಯದ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಆಸ್ಪತ್ರೆಯ ವೈದ್ಯ ಡಾ. ಪರಾಗ್ ಸಂಚೇತಿ ಹೇಳಿದ್ದಾರೆ.
ಅಣ್ಣಾಗೆ ಈಗ ಸ್ಟೆರಾಯ್ಡ್ ಇಂಜೆಕ್ಷನ್ ನೀಡಲಾಗುತ್ತಿದೆ. ಫಿಸಿಯೋಥೆರಪಿ, ಟ್ರಾಕ್ಷನ್ ಸಹ ಶುರು ಮಾಡಿದ್ದೇವೆ. ಕನಿಷ್ಠ ಒಂದು ವಾರ ಅವರು ಔಷಧೋಪಚಾರ ಪಡೆಯಬೇಕಿದೆ ಎಂದು ಡಾ. ಪರಾಗ್ ಸಂಚೇತಿ ತಿಳಿಸಿದ್ದಾರೆ.
ಪಬ್ಲಿಕ್ ಮೆಮೊರಿ ಈಸ್ ಶಾರ್ಟ್! ಅದಕ್ಕೋಸ್ಕರ ಇಲ್ಲೊಂದು ವಿಷಯ ಜ್ಞಾಪಕಕ್ಕೆ ತರಬಹುದಾದರೆ ಭಾರತಕ್ಕೆ ಲೋಕ್ ಪಾಲ್ ಮಸೂದೆ ಲಭಿಸಿ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣವಾಗಲಿ ಎಂದು 120 ಕೋಟಿ ಭಾರತೀಯರ ಪರವಾಗಿ ಹಿರಿಯಜ್ಜ ಅಣ್ಣಾ ಹಜಾರೆ ಅವರು ಏಪ್ರಿಲ್ 4ರಂದು ಮಂಗಳವಾರ ಉಪವಾಸ ಆರಂಭಿಸಿ, ಸಂಕಲ್ಪ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.












Click it and Unblock the Notifications