ಮಳೆಯಿಂದ ಬಿಬಿಎಂಪಿ ಬಚಾವ್ ಮಾಡಬಲ್ಲದೆ?
ಶಿಥಿಲಗೊಂಡಿರುವ ಮರಗಳು, ಗೋಡೆ, ಕಾಂಪೌಂಡ್ ಗಳು, ಕಟ್ಟಡಗಳು ನೆಲಕ್ಕೆ ಉರುಳುತ್ತಿದೆ. ಮ್ಯಾನ್ ಹೋಲ್ ತುಂಬಿ ಉಕ್ಕಿ ಹರಿಯುತ್ತಿದೆ. ಮತ್ತೊಮ್ಮೆ ವೃಷಭಾವತಿ ನೀರು ಗಾಳಿ ಆಂಜನೇಯದ ಪಾದ ತೊಳೆದಿದೆ. ಕೋರಮಂಗಲ ಕ್ರೀಡಾಗ್ರಾಮ ಸಮೀಪದ ಮನೆಗಳು ನೀರಿನಲ್ಲಿ ಈಜುತ್ತಿವೆ. ಒಟ್ಟಾರೆ ಸುಮಾರು 100 ಕಡೆ ಬೇಜಾನ್ ಡ್ಯಾಮೇಜ್ ಆಗಿದೆ ಎಂದು ಬಿಬಿಎಂಪಿ ಅಂದಾಜು ಮಾಡಿದೆ. ಆದರೆ, ಕಳೆದ ಬಾರಿ ಅಂದಾಜಿಸಿದ್ದಕ್ಕಿಂತ ಕಡಿಮೆ ಪ್ರದೇಶದಲ್ಲಿ ಮಳೆ ಹಾನಿ ಮಾಡಿದೆ ಎಂಬ ಸಮಾಧಾನ ಬಿಬಿಎಂಪಿಗಿದೆ.
ಬಿಬಿಎಂಪಿ ನೌಕರರು ಸಂಡೇ ಕೂಡಾ ಕೆಲಸ ಎಂದು ಗೊಣಗುತ್ತಾ, ತೇಪೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಯುದ್ಧ ಕಾಲೇ ಶಸ್ತ್ರಭ್ಯಾಸ ಎಂಬಂತೆ ಮಳೆ ಬಿದ್ದ ಮೇಲೆ ದುರಸ್ತಿ ಕಾರ್ಯ ಮಾಡುವ ಬದಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬಾರದೇಕೆ ಎಂದರೆ, ಅಧಿಕಾರಿಗಳು ಅಂಕಿಅಂಶದ ಲೆಕ್ಕಾಚಾರ ಹೇಳುತ್ತಾರೆ ಅಷ್ಟೇ. ಅಧಿಕಾರ ಅವಧಿ ಮುಗಿಸಿರುವ ಮಹಾಪೌರ ಎಸ್ ಕೆ ನಟರಾಜ್, ಗೃಹ ಸಚಿವ ಅಶೋಕ್ ಅವರು ಮತ್ತೆ ಭರವಸೆ ಮಹಾಪೂರ ಹರಿಸಿ ಮನೆಗೆ ತೆರಳಿದ್ದಾರೆ.
ಸಾವನ್ನಪ್ಪಿದ ನತದೃಷ್ಟರು: ಭಾರಿ ಮಳೆಯಿಂದ ಮೃತರಾದವರಲ್ಲಿ ಶಿವಮೊಗ್ಗ ಮೂಲದ ನಂದಿನಿ ಲೇಔಟ್ ನಿವಾಸಿ ಇಂಜಿನಿಯರ್ ಪ್ರಕಾಶ್(38) ಗೊಡೆಗೆ ಒರಗಿಕೊಂಡು ನಿಂತಿದ್ದೇ ತಪ್ಪಾಗಿದೆ. ಏಕಾಏಕಿ ಗೋಡೆ ಕುಸಿದಿದ್ದರಿಂದ ಪ್ರಕಾಶ್ ಸ್ಥಳದಲ್ಲೇ ಮೃತರಾಗಿದ್ದಾರೆ. ನಾಯಂಡನಹಳ್ಳಿ ಸಮೀಪದ ಅಂಬೇಡ್ಕರ್ ಕಾಲನಿಯ ನಿವಾಸಿ ಮಣಿಕಂಠ ಎಂಬ ಬಾಲಕ ಕಿವುಡ ಹಾಗೂ ಮೂಗನಾಗಿದ್ದ ಮಳೆ ಹೊಡೆತಕ್ಕೆ ಸಿಕ್ಕು ಬಲಿಯಾಗಿದ್ದಾನೆ. ಓಕಳೀಪುರಂ ಬಳಿ ಶಿಥಿಲಾವಸ್ಥೆಯಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ನೆಲಕ್ಕುರುಳಿದೆ.
ಶೇಷಾದ್ರಿಪುರಂ, ವೈಯಾಲಿಕಾವಲ್, ಕಾವಲ್ಭೈರಸಂದ್ರ, ತಿಲಕ್ನಗರ, ಶಿವಾಜಿನಗರ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಓಕಳೀಪುರಂ, ಕೋರಮಂಗಲ, ಇಂದಿರಾನಗರ 80 ಅಡಿ ರಸ್ತೆ, ಹಲಸೂರು, ಮರ್ಫಿಟೌನ್, ಫ್ರೇಜರ್ ಟೌನ್ನಲ್ಲಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ಬಿಬಿಎಂಪಿ ವಿಪತ್ತು ನಿರ್ವಹಣೆ ದೇವರಿಗೆ ಪ್ರೀತಿ.