ಧರ್ಮೇಂದ್ರನ ಮುಂದೆ ಭಿನ್ನಮತವೇ ಪ್ರಧಾನ
ಈಶ್ವರಪ್ಪ, ಶ್ರೀನಿವಾಸ ಕಚ್ಚಾಟ: ಶಾಸಕರ ಸಭೆಯಲ್ಲಿ ಈಶ್ವರಪ್ಪ, ಮುಖ್ಯಮಂತ್ರಿ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಅನಂತ್ ಕುಮಾರ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು. ಪಕ್ಷದಲ್ಲಿರುವ ಭಿನ್ನಮತದ ಬಗ್ಗೆ ಉಸಿರೆತ್ತದ ನಾಯಕರು ಅಭಿವೃದ್ಧಿ ಬಗ್ಗೆ ಮಾತನಾಡತೊಡಗಿದಾಗ ಎದ್ದು ನಿಂತ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಶ್ರೀನಿವಾಸ್, ಹಿರಿಯ ನಾಯಕರು ಮೊದಲು ಕಚ್ಚಾಡುವುದನ್ನು ಬಿಟ್ಟರೆ ಎಲ್ಲವೂ ಸರಿ ಹೋಗುತ್ತದೆ. ಇಲ್ಲದಿದ್ದರೆ ದೇವೇಗೌಡ ಹಾಗೂ ರಾಮಕೃಷ್ಣ ಹೆಗಡೆ ಕಚ್ಚಾಡಿ, ಜನತಾ ಪರಿವಾರವನ್ನು ಹೋಳು ಮಾಡಿದಂತೆ, ಬಿಜೆಪಿಯೂ ತೊಂದರೆ ಕಾದಿದೆ ಎಂದಿದ್ದಾರೆ.
ಇದರಿಂದ ಕೆರಳಿದ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು, ನಿಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಏನಾದರೂ ಹೇಳುವುದಿದ್ದರೆ ಹೇಳಿ, ಬೇರೆನೂ ಮಾತನಾಡಬೇಡಿ ಎಂದಿದ್ದಾರೆ. ನನಗೆ ಯಾರೂ ಬುದ್ಧಿ ಹೇಳಬೇಕಿಲ್ಲ. ಏನು ಮಾತನಾಡಬೇಕೆಂಬುದು ನನಗೆ ಗೊತ್ತು ಎಂದು ಶ್ರೀನಿವಾಸ್ ಎದುರುತ್ತರ ನೀಡಿದ್ದಾರೆ.
ಪ್ರತ್ಯೇಕ ಸಭೆ: ಇದೆಲ್ಲವನ್ನು ಕಂಡ ಪ್ರಧಾನ್, ಜನಾರ್ದನ ರೆಡ್ಡಿ ಬಣದ ಸೋಮಶೇಖರ ರೆಡ್ಡಿ, ಕರುಣಾಕರರೆಡ್ಡಿ, ಶ್ರೀರಾಮುಲು, ಶಾಂತಾ, ಫಕೀರಪ್ಪ, ಯಲಬುರ್ಗಾ ಶಾಸಕ ಈಶಣ್ಣ ಗುಳಗಣ್ಣನವರ್ ಸೇರಿದಂತೆ ಇನ್ನೂ ಅನೇಕ ಮುಖಂಡರೊಡನೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಒಟ್ಟಾರೆ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಏನು ಕುಂದಿಲ್ಲ ಎಂಬ ಸೂಚನೆ ಎಲ್ಲರಿಗೂ ಸಿಕ್ಕಿದೆ. ಸಭೆಯಲ್ಲಿ ಚರ್ಚೆಯಾದ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಸಭೆಯ ನಂತರ ಚುಟುಕು ಸುದ್ದಿಗೋಷ್ಠಿ ನಡೆಸಿದ ಧರ್ಮೇಂದ್ರ ಪ್ರಧಾನ್, ಬಿಜೆಪಿ ಸರ್ಕಾರದ ಏಳಿಗೆ ಸಹಿಸದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ವಿಷಬೀಜ ಬಿತ್ತುತ್ತಿದೆ ಎಂದರು. ಭಿನ್ನಮತದ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ ಅದಕ್ಕೆ ಅವಕಾಶವೇ ಇರಲಿಲ್ಲ ಎಂದ ಈಶ್ವರಪ್ಪ ಹೇಳಿದರು. ಕೊನೆಗೂ ಮೈಕ್ ಕೈಗೆ ತೆಗೆದುಕೊಂಡ ಮುಖ್ಯಮಂತ್ರಿ ಯಡಿಯೂರಪ್ಪ, ಅಭಿವೃದ್ಧಿ ಬಿಟ್ಟು ಬೇರೆ ಮಾತಿಲ್ಲ ಎಂದು ಮಾತು ಮುಗಿಸಿದರು.