ನಟಿ ರಮ್ಯಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಸ್ವತಃ ರಮ್ಯಾ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಸೋಮವಾರ ಇದನ್ನು ಹೇಳಿಕೊಂಡಿದ್ದು, ಯುವ ನೇತಾರ ರಾಹುಲ್ ಗಾಂಧಿಯೇ ನಮ್ಮ ಜನನಾಯಕ ಎಂದು ಘೋಷಿಸಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದೆ. ಆಗ ಕಾಂಗ್ರೆಸ್ ಸೇರುವಂತೆ ಅವರು ಆಹ್ವಾನ ನೀಡಿದರು. ಅದಕ್ಕೆ ತಕ್ಷಣ ಒಪ್ಪಿಗೆ ಸೂಚಿಸಿದೆ. ಇದೀಗ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಯುವ ಕಾಂಗ್ರೆಸ್ ಸದಸ್ಯೆಯಾಗಿ ಕೈ ಜೋಡಿಸುವುದಾಗಿ ರಮ್ಯಾ ಪ್ರಕಟಿಸಿದ್ದಾರೆ.
ಇದರಿಂದ ಬಿರು ಬೇಸಿಗೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ರಮ್ಯ ಚೈತ್ರ ಕಾಲ ಆರಂಭವಾಗಿದೆ ಎಂದೇ ಹೇಳಬಹುದು. ರಮ್ಯಾ ರಾಜಕೀಯ ಪ್ರವೇಶಕ್ಕೆ ಮಂಡ್ಯದ ಗಂಡು, ಮಾಜಿ ಸಂಸದ ಅಂಬರೀಷ್ ಮತ್ತು ಕೇಂದ್ರ ಸಚಿವ, ಮಂಡ್ಯದ ರಾಜಕೀಯ ಕಲಿ ಎಸ್. ಎಂ. ಕೃಷ್ಣ ಅವರ ಒತ್ತಾಸೆಯೂ ಇತ್ತೆಂದು ಕಾಣುತ್ತದೆ.
'ಇವತ್ತಿನ ರಾಜಕೀಯದಲ್ಲಿ ರಾಹುಲ್ ಗಾಂಧಿ ಅವರೇ ಯೂಥ್ ಐಕಾನ್. ಯುವಜನತೆ ಅವರತ್ತ ಭರವಸೆಯ ಕಣ್ಗಳಿಂದ ನೋಡಬಹುದಾಗಿದೆ. ನಾನೂ ಅದನ್ನೇ ಮಾಡಿದ್ದೇನೆ. ಮುಂಚಿನಿಂದಲೂ ಅವರ ತತ್ತ್ವ, ಸಿದ್ಧಾಂತಗಳನ್ನು ಬೆಂಬಲಿಸುತ್ತಾ ಬಂದಿದ್ದೇನೆ' ಎಂದು ರಮ್ಯಾ ಪ್ರತಿಕ್ರಿಯಿಸಿದ್ದಾರೆ. ಆದರೆ ಸದ್ಯಕ್ಕೆ ಚಿತ್ರರಂಗದಲ್ಲಿ ಬಿಸಿಯಾಗಿರುವುದರಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಇರಾದೆಯಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
'ಸುಮ್ಮನೆ ಕೂತು ಅದು ಸರಿಯಿಲ್ಲ, ಇದು ಸರಿಯಿಲ್ಲ ಎಂದು ಜರಿಯುತ್ತಿದ್ದರೆ ಏನು ಪ್ರಯೋಜನಾ? ಹಾಗೆ ಮಾಡುವುದಕ್ಕಿಂತ ನಾವೇ ಏನಾದರೂ ಮಾಡಿ ತೋರಿಸಬೇಕು ಎನ್ನುವುದು ಮುಖ್ಯ. ಅದರಲ್ಲೂ ಇಂದಿನ ಯುವ ಜನತೆಗೆ ಉತ್ತಮ ಶಕ್ತಿ, ಸಾಮರ್ಥ್ಯ ಇದೆ. ಹಾಗಾಗಿ ಯುವಜನತೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರಬೇಕು' ಎಂದು ರಾಜಕೀಯ ಪ್ರವೇಶಿಸುವಂತೆ ತಮ್ಮ ಅಭಿಮಾನಿಗಳಿಗೂ ರಮ್ಯಾ ಪರೋಕ್ಷವಾಗಿ ಕರೆ ನೀಡಿದ್ದಾರೆ.