ಎರಡನೇ ಪಿಯುಸಿ ಪ್ರಶ್ನೆಪತ್ರಿಕೆ ಮೌಲ್ಯಮಾಪನ ಆರಂಭ
ಪೂರ್ವನಿಗದಿಯಂತೆ ಇಂದಿನಿಂದ (ಏ. 8) ಮೌಲ್ಯಮಾಪನ ಆರಂಭಗೊಳ್ಳಬೇಕಿದೆ. ಆದರೆ ವೇತನ ತಾರತಮ್ಯದ ನೆಪವೊಡ್ಡಿ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾಗಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಮಾತುಕತೆ ಆಡಿದ ಒಕ್ಕೂಟದ ಪದಾಧಿಕಾರಿಗಳು ಸಚಿವರ ಭರವಸೆ ಮೇರೆಗೆ ಮೌಲ್ಯಮಾಪನಕ್ಕೆ ಹಾಜರಾಗಲು ಒಪ್ಪಿದ್ದಾರೆ. ಇತ್ತ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ವೇತನ ತಾರತಮ್ಯ ಸೇರಿದಂತೆ ಉಪನ್ಯಾಸಕರ ಇತರೆ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಸಚಿವ ಕಾಗೇರಿ ವಾಗ್ದಾನ ಮಾಡಿದ್ದಾರೆ. ಮುಖ್ಯಮಂತ್ರಿಯವರು ರಚಿಸಿರುವ ಸಮಿತಿಯ ಮುಂದೆ ಈ ವಿಚಾರ ಇಟ್ಟು ಶಿಕ್ಷಕರ ಹಿತ ಕಾಯುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮೌಲ್ಯಮಾಪನ ಬಹಿಷ್ಕಾರ ಮಾಡದಿರಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಮುನಿರಾಜು ತಿಳಿಸಿದ್ದಾರೆ. ಸರಕಾರ ಮೇ 30ರ ಒಳಗಾಗಿ ಉಪನ್ಯಾಸಕರ ವೇತನ ಪರಿಷ್ಕರಣೆ ಸಂಬಂಧ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ, ಜುಲೈ 15ರ ನಂತರ ರಾಜ್ಯಾದ್ಯಂತ ಪಿಯುಸಿ ತರಗತಿ ಬಹಿಷ್ಕರಿಸಿ ಧರಣಿ ನಡೆಸಲಾಗುವುದು ಎಂದೂ ಅವರು ಎಚ್ಚರಿಸಿದ್ದಾರೆ.