40 ಕೋಟಿ 'ಫೈನಲ್ ಬಾಜಿ' ಬಾಚಿದ ಮದ್ರಾಸಿ ಹೀರೊ
ಮುಂಬೈ, ಏ. 5: ಮದ್ರಾಸ್ ಹೀರೊ ರಜನಿಕಾಂತ್ ಅವರು ತಮ್ಮ ಪತ್ನಿ ಲತಾ, ಪುತ್ರಿ ಸೌಂದರ್ಯ ಜತೆಗೂಡಿ ವಾಂಖೇಡ್ ಸ್ಟೇಡಿಯಂನಲ್ಲಿ ಭಾರತ ವಿಶ್ವ ಕಪ್ ಗೆಲ್ಲುವುದನ್ನು ಕಣ್ಣಾರೆ ಕಂಡು ಆನಂದಿಸಿದ್ದಾರೆ. ಅದಕ್ಕೂ ಮೊದಲು ಅವರ ಅಳಿಯ, ನಟ ಧನುಶ್ ಮತ್ತು ಮಗಳು ಐಶ್ಚರ್ಯ ಮೊಹಾಲಿಯಲ್ಲಿ ಭಾರತ-ಪಾಕ್ ಕದನವನ್ನು ನೋಡಿ ಆನಂದಿಸಿದ್ದರು. ವಿದೇಶದಲ್ಲಿ ಶೂಟಿಂಗ್ ನಿಕ್ಕಿಯಾಗಿದ್ದ ಕಾರಣ ಧನುಶ್ ಫೈನಲ್ ಮ್ಯಾಚ್ ಮಿಸ್ ಮಾಡಿಕೊಂಡರು.
ರಜನಿಕಾಂತ್ ಮತ್ತು ಪುತ್ರಿ ಸೌಂದರ್ಯ ಭಾರತದ ತಂಡದ ಜೆರ್ಸಿ ಡ್ರೆಸ್ ಹಾಕಿಕೊಂಡು ಭಾರತ ತಂಡವನ್ನು ಹುರಿದುಂಬಿಸುತ್ತಿದ್ದು ಟಿವಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ವಿಐಪಿ ಬಾಕ್ಸ್ ನಲ್ಲಿ ಆಸೀನರಾಗಿದ್ದ ರಜನಿಗೆ ಅಮೀರ್ ಖಾನ್, ಕಿರಣ್ ರಾವ್, ಮುಕೇಶ್ ಅಂಬಾನಿ, ನೀತಾ ಅಂಬಾನಿ ಮುಂತಾದ ಡೈಹಾರ್ಡ್ ಕ್ರಿಕೆಟ್ ಫ್ಯಾನ್ ಗಳ ಸಾಂಗತ್ಯವೂ ಲಭಿಸಿತ್ತು ಎಂಬುದು ಗಮನಾರ್ಹ.
ಈ ಮಧ್ಯೆ, ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ. ಮದ್ರಾಸಿನ ಖ್ಯಾತ ನಟರೊಬ್ಬರು ಭಾರತ ತಂಡ ಗೆಲ್ಲುವುದರ ಬಗ್ಗೆ ಎಷ್ಟೊಂದು ವಿಶ್ವಾಸ ಹೊಂದಿದ್ದರೆಂದರೆ ಆತ ಭಾರತದ ಪರ 40 ಕೋಟಿ ರು. ಬಾಜಿ ಕಟ್ಟಿದ್ದ. ವೀರು, ಸಚಿನ್ ಔಟಾದಾಗಲೂ ಆತನ ವಿಶ್ವಾಸಕ್ಕೆ ಧಕ್ಕೆಯಾಗಲಿಲ್ಲ. ವಿಐಪಿ ಬಾಕ್ಸ್ ನಲ್ಲಿ ಕುಳಿತು ಆ ಖ್ಯಾತ ನಟ ಕೂಲ್ ಆಗಿಯೇ ಮ್ಯಾಚ್ ನೋಡುತ್ತಿದ್ದ ಎಂದು ಬುಕ್ಕಿಗಳು ತಿಳಿಸಿದ್ದಾರೆ.
ಬಾಲಿವುಡ್ ನ ಕೆಲವು ಖ್ಯಾತ ನಾಮರು ಮ್ಯಾಚ್ ಆರಂಭಕ್ಕೂ ಮುನ್ನ ಲೋಖಂಡವಾಲಾದಲ್ಲಿ ಬುಕ್ಕಿಗಳ ಜತೆ ಸಭೆ ನಡೆಸಿ, ತಮ್ಮ ಶಕ್ತ್ಯಾನುಸಾರ ಬೆಟ್ ಕಟ್ಟಿದ್ದರು. 'ಲೇಕಿನ್ ಸಾರಾ ಪೈಸಾ ವೊ ಮದ್ರಾಸ್ ಕಾ ಹೀರೊ ಲೇ ಕರ್ ಗಯಾ' ಎಂದು ಬುಕ್ಕಿಗಳು ಮ್ಯಾಚ್ ಬಳಿಕ ಗೋಳಾಡಿದ್ದಾರೆ. ಪಂದ್ಯದುದ್ದಕ್ಕೂ ಬಾಜಿಯಾಟ ಹಾವು ಏಣಿಯಾಟದಂತೆ ಸಾಗಿತ್ತು. ನಾವು ಭಾರಿ ಹಣ ಕಳೆದುಕೊಂಡೆವು ಎಂದು ಕೆಲವು ಬಾಲಿವುಡ್ ಮಂದಿಯೂ ಅಲವತ್ತುಕೊಂಡಿದ್ದಾರೆ.
ಅಂದಹಾಗೆ, ಮುಂಬೈ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಿದ್ದ ದಕ್ಷಿಣ ಭಾರತದ ಇಬ್ಬರು ಖ್ಯಾತ ನಟರೆಂದರೆ ರಜನಿಕಾಂತ್ ಹಾಗೂ ಮತ್ತೊಬ್ಬರು ತೆಲುಗು ನಟ ವೆಂಕಟೇಶ್. ವೆಂಕಟೇಶ್ ಶುದ್ಧ ಡೈಹಾರ್ಡ್ ಕ್ರಿಕೆಟ್ ಫ್ಯಾನ್. ಅಷ್ಟಕ್ಕೂ ಬುಕ್ಕಿಗಳ ಪ್ರಕಾರ ಬಾಜಿ ಕಟ್ಟಿದ್ದವರು ಮದ್ರಾಸ್ ಹೀರೊ. ಆದರೆ ಆ ಮದ್ರಾಸ್ ಹೀರೊ ರಜನಿಯೇ ಎಂಬುದು ದೃಢಪಟ್ಟಿಲ್ಲ.
ಪ್ರಮುಖವಾಗಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ದುಬೈ ಸೇರಿದಂತೆ ವಿಶ್ವದಾದ್ಯಂತ ಮುಂಬೈ ಫೈನಲ್ ಪಂದ್ಯಕ್ಕೆ 25,000 ಕೋಟಿ ರು. ಬಾಜಿ ಕಟ್ಟಲಾಗಿತ್ತು.












Click it and Unblock the Notifications