ಸುನಾಮಿ ಭೀತಿ: ಕರಾವಳಿಯಲ್ಲಿ ಆತಂಕದ ಅಲೆಗಳು
ಭಟ್ಕಳ ಬಂದರಿನಲ್ಲಿ ಲಂಗುರು ಹಾಕಿದ್ದ ನೂರಾರು ಮೀನುಗಾರಿಕೆ ಬೋಟುಗಳ ಪೈಕಿ ಸುಮಾರು 10 ಬೋಟುಗಳು ಒಂದಕ್ಕೊಂದು ತಾಗಿ ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ. ಸಮುದ್ರ ತೀರದಲ್ಲಿ ತೀರಾ ಆಕಸ್ಮಿಕವಾಗಿ ಕಾಣಿಸಿಕೊಂಡ ಈ ಅಲೆಗಳ ಅಬ್ಬರ ಸ್ವಲ್ಪ ಕಡಿಮೆಯಾಗಿದೆ. ಆದರೆ ಮತ್ತೆ ಅಲೆಗಳು ಸೃಷ್ಟಿಯಾಗಬಹುದೆಂಬ ಭೀತಿ ಬೆಸ್ತರಲ್ಲಿ ಮನೆ ಮಾಡಿದೆ. ಮರವಂತೆ ಸಮುದ್ರ ತೀರದಲ್ಲಿ ಭಾರಿ ಗಾತ್ರದ ಅಲೆಗಳು ಹೆದ್ದಾರಿಗೆ ಹೊಂದಿಕೊಂಡಿರುವ ತಡೆಗೋಡೆಗೆ ಅಪ್ಪಳಿಸಿ, ರಸ್ತೆ ಮೇಲೆ ನೀರು ಚಿಮ್ಮುತ್ತಿದೆ. ಅಂಗಡಿ ಮುಂಗಟ್ಟು ಅಲೆಯ ಹೊಡೆತಕ್ಕೆ ನಲುಗಿವೆ. ಹೆದ್ದಾಋಇ ಮೇಲಿನ ಪ್ರಯಾಣ ದುಸ್ಸಾಹಸದ್ದಾಗಿದೆ.
ತಾಲೂಕಿನ ಪ್ರಮುಖ ನದಿಗಳಲ್ಲೂ ಸಹ ಉಬ್ಬರ ಕಂಡಿಬಂದಿದೆ. ಕೋಣಿ, ಆನಗಳ್ಳಿಯಲ್ಲಿ ನದಿಗಳು ಭರ್ತಿಯಾಗಿ ನದಿ ಪಾತ್ರದ ಕೃಷಿ ಭೂಮಿಗೆ ನೀರು ನುಗ್ಗಿದೆ. ಸುರತ್ಕಲ್-ನಲ್ಲಿ ಮಳೆಗಾಲದ ಅಲೆಗಳಂತೆ ಉಗ್ರ ರೂಪ ತಾಳಿತ್ತು. ಈ ರೀತಿ ವರ್ಷದಲ್ಲಿ ಒಂದೆರಡು ಬಾರಿ ನೀರು ಉಕ್ಕುವುದು ಸಾಮಾನ್ಯ. ಇದನ್ನು ಮೀನುಗಾರರು 'ಕಳ್ಳ ನೀರು' ಎನ್ನುತ್ತಾರೆ. ಸೆಖೆ ತಾಳಲಾರದೆ ಕಾಸರಗೋಡು ನೆಲ್ಲಿಕುಂಜೆ ಸಮುದ್ರ ಕಿನಾರೆ ಸಮೀಪ ಸೋಮವಾರ ರಾತ್ರಿ ನಿದ್ರಿಸುತ್ತಿದ್ದ ಹಲವು ಬೆಸ್ತರು, ಇದ್ದಕ್ಕಿಂದ್ದಂತೆ ಬಂದ ದೊಡ್ಡ ಅಲೆಗಳನ್ನು ಕಂಡು ಬೆಚ್ಚಿಬಿದ್ದರು. ಇದನ್ನು ಕಂಡು ಸಮೀಪದ ಮನೆಗಳಲ್ಲಿದ್ದ ಜನರೂ ಕಾಲ್ಕಿತ್ತರು. ಸೋಮವಾರ ರಾತ್ರಿ 10 ಗಂಟೆಗೆ ಆರಂಭಗೊಂಡ ಈ ಸಮುದ್ರ ಭೋರ್ಗರೆತ ಮುಂಜಾನೆ 2 ಗಂಟೆ ವರೆಗೂ ಮುಂದುವರಿಯಿತು.