ಜೈವಿಕ ಇಂಧನಕ್ಕೆ ಪ್ರೋತ್ಸಾಹ: ಯಡಿಯೂರಪ್ಪ
ಪೆಟ್ರೋಲಿಯಂ ಮೂಲಗಳು ಬರಿದಾಗುತ್ತಿರುವ ಹಾಗೂ ಪರಿಸರ ಅಸಮತೋಲನ ಮತ್ತು ಜಾಗತಿಕ ಬಿಸಿಯೇರಿಕೆಯಂತಹ ಬೃಹತ್ ಸವಾಲನ್ನು ಎದುರಿಸುತ್ತಿರುವ ಈ ಸಂಕೀರ್ಣ ಸಂದರ್ಭದಲ್ಲಿ ಪರ್ಯಾಯ ಇಂಧನ ಮೂಲಗಳತ್ತ ಗಮನಹರಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ಜೈವಿಕ ಇಂಧನ ಸಸಿಗಳನ್ನು ಬೆಳೆಸಲು ಆರ್ಥಿಕ ನೆರವು ಸೇರಿದಂತೆ ಎಲ್ಲ ರೀತಿಯ ನೆರವು ನೀಡುವುದಾಗಿ ಅವರು ಹೇಳಿದರು.
ಜೈವಿಕ ಇಂಧನ ಉತ್ತೇಜಿಸಲು 'ಹಸಿರು ಹೊನ್ನು-ಬರಡು ಬಂಗಾರ' ಎಂಬ ವಿನೂತನ ಕಾರ್ಯಕ್ರಮವನ್ನು ಸರಕಾರ ಹಮ್ಮಿಕೊಂಡಿದೆ. ಅಲ್ಲದೆ ಪಶ್ಚಿಮಘಟ್ಟ ಕಾರ್ಯಪಡೆ, ಜೀವ ವೈವಿಧ್ಯ ಮಂಡಳಿಯ ಅರಣ್ಯ ರಕ್ಷಣೆ ಕಾರ್ಯಕ್ರಮದ ಮೂಲಕವೂ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದಾಗಿ ಅವರು ಹೇಳಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮಾತನಾಡಿ ಎನ್ಡಿಎ ಸರಕಾರದ ಅವಧಿಯಲ್ಲಿ ಅಂದಿನ ಪ್ರಧಾನಿ ವಾಜಪೇಯಿ ಅವರು ಜೈವಿಕ ಇಂಧನಕ್ಕೆ ಭಾರಿ ಮಹತ್ವ ನೀಡಿದ್ದರು. ಆದರೆ ಇಂದಿನ ಯುಪಿಎ ಸರಕಾರ ಇದನ್ನು ಕಡೆಗಣಿಸಿದೆ ಎಂದು ದೂರಿದರು. ಕೇಂದ ಸರಕಾರದ ಮೇಲೆ ಕೆಲವು ಮಾಫಿಯಾಗಳು ಒತ್ತಡ ಹಾಕಿ ಜೈವಿಕ ಇಂಧನ ಯೋಜನೆಗಳು ಅನುಷ್ಠಾನಗೊಳ್ಳದಂತೆ ಸಂಚು ನಡೆಸುತ್ತಿವೆ. ಕೇಂದ್ರ ಇದಕ್ಕೆ ಸೊಪ್ಪುಹಾಕಬಾರದು ಎಂದು ಗಡ್ಕರಿ ಮನವಿ ಮಾಡಿದರು.
ಸಚಿವರಾದ ವಿ.ಎಸ್. ಆಚಾರ್ಯ, ಜಗದೀಶ್ ಶೆಟ್ಟರ್, ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಜೈವಿಕ ಇಂಧನ ಘಟಕದ ರಾಷ್ಟ್ರೀಯ ಸಂಚಾಲಕ ಅಣ್ಣಾಸಾಹೇಬ್ ಎಂ.ಕೆ. ಪಾಟೀಲ್, ರಾಜ್ಯ ಸಂಚಾಲಕ ಜೆ.ಟಿ. ರಾಜಶೇಖರ್, ಮಂಡಳಿ ಅಧ್ಯಕ್ಷ ಕೃಷ್ಣಮೂರ್ತಿ ಸಮಾರಂಭದಲ್ಲಿ ಹಾಜರಿದ್ದರು.