ಮೂಗಿಗೆ ತುಪ್ಪ ಸವರದಿರಲು ವಾಟಾಳ್ ಆಗ್ರಹ

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು ಈ ನಾಲ್ಕು ಜಿಲ್ಲೆಗಳನ್ನು ಸೇರಿಸಿ ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಪ್ರಕಟಿಸಬೇಕು. ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರೈಲು ಯೋಜನೆ, ಚಾಮರಾಜನಗರಕ್ಕೆ ಕನಕಪುರ ಮಾರ್ಗ ನೂತನ ರೈಲು ಸಂಪರ್ಕ ಕಲ್ಪಿಸಬೇಕು. ಅದಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಹಿಂದುಳಿದ ಗಡಿ ಜಿಲ್ಲೆ ಚಾಮರಾಜನಗರಕ್ಕೆ ಕಾವೇರಿ 2ನೇ ಹಂತ, ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ, ಮೆಡಿಕಲ್ ಕಾಲೇಜು, ಮುಜರಾಯಿ ದೇವಾಲಯಗಳ ಅಭಿವೃಧ್ಧಿ, ಚಾ.ನಗರ- ನಂಜನಗೂಡು ರಾಷ್ಟ್ರೀಯ ಹೆದ್ದಾರಿಯನ್ನು ಜೋಡಿರಸ್ತೆಯಾಗಿ ಮಾರ್ಪಡಿಸುವುದು, ಕೆಎಸ್ಆರ್ಟಿಸಿ ಡಿಪೋ ಮೇಲ್ದರ್ಜೆಗೇರಿಸುವುದು ಸೇರಿದಂತೆ ಹಲವಾರು ಅಭಿವೃಧ್ಧಿ ಯೋಜನೆಗಳನ್ನು ಈ ಬಾರಿಯ ಬಜೆಟ್ನಲ್ಲಿ ಸೇರ್ಪಡೆ ಮಾಡಬೇಕು ಆಗ್ರಹಿಸಿದರು.
ತಮಿಳುನಾಡಿಗೆ ಹೆದರಿ ಕುಳಿತುಕೊಳ್ಳದೆ ತ್ವರಿತವಾಗಿ ಮಹದೇಶ್ವರ ಬೆಟ್ಟದಲ್ಲಿ ಕಾವೇರಿ ನೀರು ತರಬೇಕು ಎಂದು ಒತ್ತಾಯಿಸಿದ ಅವರು, ತೀರಾ ಹಿಂದುಳಿದ ಗಡಿ ಜಿಲ್ಲೆಯನ್ನು ಎಲ್ಲಾ ಸರ್ಕಾರಗಳು ಸಂಪೂರ್ಣ ನಿರ್ಲಕ್ಷ ಮಾಡುತ್ತಲೇ ಬಂದಿವೆ. ಚಾಮರಾಜನಗರ ಜಿಲ್ಲೆ ಆಯ್ತು. ಕಟ್ಟಡಗಳು ಅಯ್ತು. ಆದರೆ ಜಿಲ್ಲೆಯ ಜನರಿಗೆ ಅಗತ್ಯವಾಗಿ ಬೇಕಾದ ಯೋಜನೆಗಳೇ ಇಲ್ಲ ಎಂದು ಸರ್ಕಾರಗಳ ಕಾರ್ಯವೈಖರಿಯನ್ನು ಟೀಕಿಸಿದರು.
ಚಾ.ನಗರದಲ್ಲಿ ಈಗಿರುವ ನೀರು ಸಾಲುತ್ತಿಲ್ಲ. 2ನೇ ಹಂತದ ಕಾವೇರಿ ಯೋಜನೆ ಮಾಡಬೇಕು. ಕಾವೇರಿ ಕಪಿಲಾ ನದಿಯಿಂದ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳು ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಬೇಕು. ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರವನ್ನು ರದ್ದು ಮಾಡುವ ಚಿಂತನೆ ಬಿಟ್ಟು ಪ್ರಾಧಿಕಾರದ ಮೂಲಕವೇ ಚಾಮರಾಜನಗರ ಉಪನಗರ ನಿರ್ಮಾಣ ಮಾಡಬೇಕು ಎಂದೂ ಸಲಹೆ ಮಾಡಿದರು.
21ರಂದು ಪ್ರದರ್ಶನ : ಈ ಎಲ್ಲಾ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈ ತಿಂಗಳ 21ರಂದು ಚಾಮರಾಜನಗರ ಜಿಲ್ಲಾಡಳಿತ ಭವನದ ಮುಂದೆ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಭಾರಿ ಪ್ರದರ್ಶನ ನಡೆಸಲಾಗುವುದು ಎಂದು ಹೇಳಿದರು.












Click it and Unblock the Notifications