ಇ ಸಿಟಿ ಬಳಿ ಮತ್ತೆ ಸಾಮೂಹಿಕ ಅತ್ಯಾಚಾರ
6 ಮಂದಿ ದುಷ್ಕರ್ಮಿಗಳು ಬಲವಂತವಾಗಿ ಗೃಹಿಣಿಯನ್ನು ಕಾರಿನಲ್ಲಿ ಅಪಹರಿಸಿ ಬೇಗೂರು ಸಮೀಪದ ನಿರ್ಜನ ಪ್ರದೇಶವೊಂದರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ಸಂಬಂಧ ವಿಜಯನಗರ ನಿವಾಸಿ ಅತ್ಯಾಚಾರಕ್ಕೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಮೊಕದ್ದಮೆ ದಾಖಲಿಸಿಕೊಂಡಿರುವ ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ಉದಯ್ ಕುಮಾರ್, ಮಧು, ರೆಡ್ಡಿ, ಬಸವರಾಜು, ಸಂತೋಷ್, ರಂಜಿತ್ ಎಂಬ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ. ಸಿಕ್ಕಿಬಿದ್ದ ಪಡ್ಡೆ ಹುಡಗರಲ್ಲಿ ಒಬ್ಬ ಪ್ರಭಾವಿ ರಾಜಕಾರಣಿಯ ಸಂಬಂಧಿಕ ಎನ್ನಲಾಗಿದ್ದು, ಪ್ರಕರಣ ಮುಚ್ಚಿ ಹಾಕುವ ಪಯತ್ನಗಳು ನಡೆದರೂ, ರಾಜಕಾರಣಿಯ ಮಾತಿನಂತೆ ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಆಗುತ್ತಿದೆ ಕ್ರೈಂ ಸಿಟಿ: ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ರೀತಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗುತ್ತಿರುವುದು ಇದು ಎರಡನೇ ಬಾರಿ. ತೀರಾ ಇತ್ತೀಚೆಗೆ ಜಾರ್ಖಂಡ್ ಮೂಲದ ಎಂಬಿಎ ಪದವೀಧರೆಯನ್ನು ಕಿಡ್ನಾಪ್ ಮಾಡಿ ಇದೇ ರೀತಿ ದೌರ್ಜನ್ಯ ನಡೆಸಲಾಗಿತ್ತು. ಬ್ಯಾಂಕ್ ಎಟಿಎಂ ದರೋಡೆ, ಪಾದಚಾರಿಗಳಿಂದ ಹಣ ಸುಲಿಗೆ, ಟೆಕ್ಕಿಗಳ ಸಾವಿನ ಸರಣಿ ಜೊತೆಗೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದು ಸುತ್ತಮುತ್ತಲಿನ ನಾಗರಿಕರಿಗೆ ಆತಂಕ ತಂದಿದೆ.