ಓದಿಕೊ ಅಂತ ಹೇಳಿದ್ದಕ್ಕೇ ನೇಣು ಹಾಕಿಕೊಳ್ಳೋದಾ?
ಸಾಗರದ ರಾಮಮನೋಹರ ಲೋಹಿಯಾ ಬಡಾವಣೆಯ ನಿವಾಸಿ, ಉದ್ಯಮಿ ರಮೇಶ್ ಎಂಬುವರ ಪುತ್ರ ರಾಹುಲ್(10) ಆತ್ಮಹತ್ಯೆ ಮಾಡಿಕೊಂಡ ಬಾಲಕನೆಂದು ಗುರುತಿಸಲಾಗಿದೆ. ಈತ ಪ್ರಗತಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಮತ್ತು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ.
ನಿನ್ನೆ ಸಂಜೆ ಈತನ ತಾಯಿ ಮಾರುಕಟ್ಟೆಗೆ ಹೊರಟಿದ್ದರು. ಈ ಸಂದರ್ಭದಲ್ಲಿ ತಾನೂ ಕೂಡ ಬರುವುದಾಗಿ ರಾಹುಲ್ ಹಠ ಹಿಡಿದಿದ್ದ. ಪರೀಕ್ಷೆ ಹತ್ತಿರ ಬಂದಿದ್ದು, ಚೆನ್ನಾಗಿ ಓದಿಕೋ. ಎಲ್ಲಿಗೂ ಬರುವುದು ಬೇಡವೆಂದು ಬುದ್ದಿಮಾತು ಹೇಳಿದ ತಾಯಿ, ಮನೆಯ ಗೇಟ್ಗೆ ಬೀಗ ಹಾಕಿಕೊಂಡು ಮಾರುಕಟ್ಟೆಗೆ ತೆರಳಿದ್ದರು.
ಇದರಿಂದ ಮನನೊಂದ ರಾಹುಲ್ ಮನೆಯ ಹಿಂದಿನ-ಮುಂದಿನ ಬಾಗಿಲುಗಳ ಚಿಲಕ ಹಾಕಿದ್ದಾನೆ. ನಂತರ ವೇಲ್ನಿಂದ ಮನೆಯ ತೊಲೆಯೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಂತರ ಅವರ ತಾಯಿ ಮನೆಗೆ ಹಿಂದಿರುಗಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ಸಾವಿನಿಂದ ಮನೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಸಾಗರ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.