ಚರ್ಚ್ ದಾಳಿ : ಸಂಘ, ಬಿಜೆಪಿಗೆ ಕ್ಲೀನ್ ಚಿಟ್
ಆಯೋಗದ ಮುಖ್ಯಸ್ಥ ನ್ಯಾಯಮೂರ್ತಿ ಸೋಮಶೇಖರ್ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಚರ್ಚ್ ಮೇಲಿನ ದಾಳಿಗೆ ಸಂಬಂಧಿಸಿದ 2437 ಪುಟಗಳ ಸಮಗ್ರ ವರದಿಯೊಂದನ್ನು ನೀಡಿದ್ದು, ಘಟನೆಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚರ್ಚ್ ಮೇಲಿನ ದಾಳಿಗೆ ಮತಾಂತರ ಪ್ರಮುಖ ಕಾರಣವಾಗಿದೆ. ಇದೇ ಕಾರಣಕ್ಕೆ ಚರ್ಚ್ ಮೇಲೆ ದಾಳಿ ನಡೆದಿದೆ. ಹಿಂದೂ ಧರ್ಮೀಯರನ್ನು ಆಸೆ ಆಮಿಷಕ್ಕೆ ಒಳಪಡಿಸಿ ಮತಾಂತರ ಮಾಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ಘಟನೆಗೆ ಸಂಬಂಧಿಸಿದಂತೆ ಆಯೋಗವು ಸುಮಾರು 109 ದೂರುಗಳ ಪರಿಶೀಲನೆ ನಡೆಸಿದೆ. ಸುಮಾರು 300 ದಿನಗಳ ಕಾಲ ಘಟನೆಯ ವಿಚಾರಣೆ ನಡೆದಿದೆ. ನ್ಯಾಯಮೂರ್ತಿ ಸೋಮಶೇಖರ್ ಆಯೋಗವು ಸರಕಾರಕ್ಕೆ ವರದಿ ಸಲ್ಲಿಸುವ ಸಂದರ್ಭದಲ್ಲಿ ಗೃಹ ಸಚಿವ ಆರ್ ಅಶೋಕ್, ಕಾನೂನು ಸಚಿವ ಸುರೇಶ್ ಕುಮಾರ್ ಉಪಸ್ಥಿತರಿದ್ದರು.
ನ್ಯಾ. ಸೋಮಶೇಖರ್ ಆಯೋಗ ನೀಡಿರುವ ವರದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಪ್ರತಿಪಕ್ಷಗಳು, ಸರಕಾರವೇ ಹೇಳಿ ಬರೆಸಿಕೊಂಡ ವರದಿ ಎಂದು ಲೇವಡಿ ಮಾಡಿವೆ. ರಾಜ್ಯದ ಮಂಗಳೂರು, ಬೆಂಗಳೂರು, ಕೋಲಾರ, ಚಿಕ್ಕಮಗಳೂರು, ಬೆಳಗಾವಿ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚರ್ಚ್ ಮೇಲೆ ದಾಳಿ ನಡೆದಿತ್ತು. ಚರ್ಚ್ ದಾಳಿ ಸರಕಾರಕ್ಕೆ ತೀವ್ರ ಅಪಾಯವನ್ನು ಸಹ ತಂದೊಡ್ಡಿತ್ತು.(ಚರ್ಚ್ ದಾಳಿ)