ಬಿಬಿಎಂಪಿ ಆಯುಕ್ತ ಸಿದ್ದಯ್ಯ ಎತ್ತಂಗಡಿಗೆ ಲಾಬಿ
ಮೇಯರ್ ಎಸ್ ಕೆ ನಟರಾಜ್, ಉಪಮೇಯರ್ ದಯಾನಂದ ಹಾಗೂ ನಗರದ ಎಂಟು ಶಾಸಕರು ಸಿದ್ದಯ್ಯ ಅವರನ್ನು ವರ್ಗಾವಣೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪ್ರಕರಣ ಈಗಾಗಲೇ ರಾಜ್ಯಪಾಲರಿಗೆ ತಲುಪಿದೆ.
ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ನೇತೃತ್ವದಲ್ಲಿ ಕಾರ್ಪೋರೇಟರ್ ಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಸಿದ್ಧಯ್ಯ ವರ್ಗಾವಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ವರ್ಗಾವಣೆ ಮಾಡಿದ್ದೆ ಆದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ಕ್ರಿಯಾ ಕಾರ್ಮಿಕರ ಸಮಿತಿ ಸಿದ್ದಯ್ಯ ಅವರನ್ನು ವರ್ಗಾವಣೆ ಮಾಡಿದರೆ ಪೌರಕಾರ್ಮಿಕ ಸಂಘಗಳು ಹೋರಾಟ ಮಾಡುತ್ತವೆ. ದಲಿತ ಮತ್ತು ಶೋಷಿತ ಜನಾಂಗದಿಂದ ಉನ್ನತ ಹುದ್ದೆ ಅಲಂಕರಿಸಿರುವ ವ್ಯಕ್ತಿಯನ್ನು ಕಾರಣವಿಲ್ಲದೆ ವರ್ಗ ಮಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿವೆ.
ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ವಿರುದ್ಧವಾಗಿ ಆದೇಶ ಹೊರಡಿಸಿರುವುದು ಮೇಯರ್ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, ನಿಯಮಗಳಿಗೆ ವಿರುದ್ಧವಾಗಿ ಕೈಗೊಂಡ ನಿರ್ಣಯಗಳಿಗೆ ಆದೇಶ ಹೊರಡಿಸಲು ಆಯುಕ್ತರು ನಿರಾಕರಿಸಿದ್ದೇ ಜನಪ್ರತಿನಿಧಿಗಳ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಮೂಲಗಳು ತಿಳಿಸಿವೆ.(ಬಿಬಿಎಂಪಿ)