Get Updates
Get notified of breaking news, exclusive insights, and must-see stories!

ರಾಜ್, ವಿಷ್ಣು ಪ್ರತಿಮೆ, ಬಳ್ಳಾರಿಗೆ ಹೊಸ ಕಳೆ

Dr. Raj, Vishnu Statues new attraction in Bellary
ಗಡಿನಾಡಾದ ಬಳ್ಳಾರಿಯಲ್ಲಿ ಕನ್ನಡಿಗರ ಸ್ವಾಭಿಮಾನ ಸಂಕೇತವಾದ ಇಬ್ಬರು ಮೇರು ನಟರ ಪುತ್ಥಳಿಗಳು ಪ್ರತಿಷ್ಠಾಪನೆಗೊಂಡು 'ನಾವುಗಳು ಬಳ್ಳಾರಿಯಲ್ಲಿದ್ದೇವೆ" ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಹಾನಗರ ಪಾಲಿಕೆ ಮಾಡಿದೆ.

ಬಿಸಿಲು, ಬಿರು ಬಿಸಿಲು, ಕನ್ನಡ - ತೆಲುಗು ದ್ವಿಭಾಷಾ ಸಂಸ್ಕೃತಿಯನ್ನು ಹೊಂದಿರುವ ಬಳ್ಳಾರಿಯಲ್ಲಿ ಕನ್ನಡಪರ ವಾತಾವರಣ ಮೂಡಿದ್ದು 1956ರಲ್ಲಿ. ಅದೂ ಬಳ್ಳಾರಿ ನಗರವನ್ನು ಕರ್ನಾಟಕಕ್ಕೆ ಸೇರಿಸುವಾಗ ಮಾತ್ರ.

ಬಳ್ಳಾರಿ ಬದಲಾಗುತ್ತಿದೆ:ಆ ನಂತರದ ದಿನಗಳಲ್ಲಿ ಕನ್ನಡಿಗರಲ್ಲಿ ಅನಾಥಪ್ರಜ್ಞೆ ಮೂಡಿತ್ತು. ದಿನೇ ದಿನೇ ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳಿಂದ 'ಬಳ್ಳಾರಿ ಆಂಧ್ರಕ್ಕೆ ಸೇರಬೇಕು" ಎನ್ನುವ ಮಾತುಗಳನ್ನು ಕೇಳಿದ್ದ ಕನ್ನಡಿಗರಲ್ಲಿ ಆತಂಕ ಮನೆ ಮಾಡಿತ್ತು.

ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸುವ ಮಾತು ಸಾಧ್ಯವೇ ಇಲ್ಲ ಎಂದು ಕನ್ನಡಪರ ಹೋರಾಟಗಾರರು, ಚಿಂತಕರು, ಸಾಹಿತಿಗಳು ಎಷ್ಟೇ ಹೇಳಿದ್ದರೂ ಕೂಡ, ಸ್ಥಳೀಯ ಕನ್ನಡಿಗರಲ್ಲಿ ಅನಾಥಪ್ರಜ್ಞೆ, ಆತಂಕಗಳು ಮಾತ್ರ ದೂರವಾಗಿರಲಿಲ್ಲ.

ಜನಪರ ವಿವಿಧ ಯೋಜನೆಗಳು ಜಾರಿ ಆಗುತ್ತಿವೆ. ಇಕ್ಕಟ್ಟಾದ ರಸ್ತೆಗಳಲ್ಲಿ ಅಗಲವಾದ ರಸ್ತೆಗಳು ಬರುತ್ತಿವೆ. ಬದಲಾಗುತ್ತಿರುವ ನಗರಕ್ಕೆ ಜನವಿರೋಧವೂ ಇದೆ. ಆದರೂ ಕೂಡ, ಜನತೆ ಮಹಾನಗರ ಪಾಲಿಕೆಗೆ ಬೆಂಬಲ ನೀಡುತ್ತಾ, ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಮೇರು ನಟರಿಂದ ಹೊಸ ಕಳೆ: ಆದರೆ, ಬಳ್ಳಾರಿ ಮಹಾನಗರಪಾಲಿಕೆ ನಗರದ ಹೃದಯಭಾಗದಲ್ಲಿ ಬಳ್ಳಾರಿ ಅಜೆಂಡಾ ಟಾಸ್ಕ್ ಫೋರ್ಸ್ ಮೂಲಕ ಡಾ. ರಾಜಕುಮಾರ್ ಹೆಸರಲ್ಲಿ ಪಾರ್ಕ್ ಪ್ರಾರಂಭಿಸಿ ಆಳೆತ್ತರದ ಡಾ. ರಾಜಕುಮಾರ್ ಅವರ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಿ ಕನ್ನಡಿಗರ ಆತ್ಮಸ್ಥೈರ್ಯಕ್ಕೆ ಶಕ್ತಿ ನೀಡಿತ್ತು. ಈಗ, ಕನ್ನಡದ ಇನ್ನೊಬ್ಬ ಮೇರು ನಟ ಡಾ. ವಿಷ್ಣುವರ್ಧನ್ ಅವರ ಹೆಸರಲ್ಲಿ ಪಾರ್ಕ್ ನಿರ್ಮಿಸಿ, ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಿದೆ. ಈ ಇಬ್ಬರು ನಟರು ಕನ್ನಡಿಗರ ಕಣ್ಣುಗಳು ಇದ್ದಂತೆ.

ಹೀಗಾಗಿ ಈಗ ಬಳ್ಳಾರಿ ನಗರದ ಕನ್ನಡಿಗರ ಮನಸ್ಸಿನ ಮೂಲೆಯಲ್ಲಿದ್ದ ಆತಂಕ, ಭಯ ಎಲ್ಲವೂ ಮಾಯವಾಗಬೇಕು. ಅಲ್ಲದೇ, ನಾವಿರುವುದು ಕನ್ನಡ ನಾಡಿನಲ್ಲಿ. ಕನ್ನಡಿಗರೊಂದಿಗೇ ಎನ್ನುವ ವಿಶ್ವಾಸದ ಮಾತುಗಳನ್ನಾಡಬೇಕು. ದ್ವಿಭಾಷಾ ಪ್ರಭಾವದಲ್ಲೇ ತನ್ನತನವನ್ನು ಉಳಿಸಿಕೊಂಡು ನಾಡು-ನುಡಿಯ ಸೇವೆಗಾಗಿ ಮುಂದಾಗಬೇಕಾಗಿದೆ.

ಡಾ. ರಾಜಕುಮಾರ್ ಪಾಕ್ ಮತ್ತು ಪುತ್ಥಳಿ ಅನಾವರಣಕ್ಕೆ ರಾಜ್ ಕುಟುಂಬದ ಸದಸ್ಯರೇ ಸಾಕ್ಷಿ ಆಗಿದ್ದರು. 'ಮೈಲಾರಿ" ಚಿತ್ರದ ವಿಜಯೋತ್ಸವಕ್ಕೆ ಆಗಮಿಸಿದ್ದ ಶಿವರಾಜಕುಮಾರ್ 'ಅಣ್ಣಾವ್ರ ಪುತ್ಥಳಿ ಜೀವಂತವಾಗಿದೆ. ಕಳೆಗಟ್ಟಿದೆ" ಎಂದಿದ್ದರು. ಜನವರಿ 22ರ ಶನಿವಾರ ಡಾ. ವಿಷ್ಣುವರ್ಧನ್ ಪಾರ್ಕ್ ಮತ್ತು ಪುತ್ಥಳಿ ಅನಾವರಣ ನಗರದ ಹೊರ ವಲಯದಲ್ಲಿ ನಡೆಯಲಿದೆ. ವಿಷ್ಣುವರ್ಧನ್ ಕುಟುಂಬ ಸಾಕ್ಷಿ ಆಗಲಿದೆ.

ವಿಷ್ಣುವರ್ಧನ್ ಪಾರ್ಕ್ : ಕುವೆಂಪು ನಗರದಲ್ಲಿ 3 ಎಕರೆ ಭೂಮಿಯಲ್ಲಿ 1.2 ಕೋಟಿ ರುಪಾಯಿ ವೆಚ್ಚದಲ್ಲಿ ಜಿಂದಾಲ್ ಸಹಯೋಗದಲ್ಲಿ ವಿಷ್ಣುವರ್ಧನ್ ಪಾರ್ಕ್, 10 ಲಕ್ಷ ರುಪಾಯಿ ವೆಚ್ಚದಲ್ಲಿ 9 ಅಡಿ ಎತ್ತರದ ಡಾ. ವಿಷ್ಣುವರ್ಧನರ ಕಂಚಿನ ಪುತ್ಥಳಿ ಅನಾವರಣಗೊಳ್ಳಲಿದೆ. ಈ ಪಾರ್ಕ್‌ನಲ್ಲಿ ಮಕ್ಕಳಾಟಕ್ಕೆ ಜಾರುಬಂಡೆ, ಹುಲ್ಲು ಹಾಸಿಗೆ, ವಾಕಿಂಗ್‌ಗಾಗಿ ಸರ್ವಕಾಲಿಕ ರಸ್ತೆಗಳು, ಗಿಡಮರಗಳು, ಕಾರಂಜಿಗಳು ಇವೆ.

ಸುರಕ್ಷೆಗಾಗಿ ಸುತ್ತಲೂ ಆವರಣ ಗೋಡೆ ಇದೆ. ಆಸನಗಳ ವ್ಯವಸ್ಥೆ ಇದೆ. ವಿದ್ಯುತ್ ಮತ್ತು ದೀಪಗಳ ವ್ಯವಸ್ಥೆ ಇದೆ. ಪಾಲಿಕೆ ಆಯುಕ್ತ ತಿಮ್ಮಪ್ಪ, 'ಸ್ವಚ್ಛ ಬಳ್ಳಾರಿ - ಸುಂದರ ಬಳ್ಳಾರಿ"ಯ ರೂವಾರಿ ಶಾಸಕ ಜಿ. ಸೋಮಶೇಖರರೆಡ್ಡಿ 'ಜನರ ಆರೋಗ್ಯ, ಮಕ್ಕಳ ಬಾಲ್ಯ, ಹಿರಿಯ ಒಂಟಿತನ ಕಳೆಯಲು ಪಾರ್ಕ್‌ಗಳು ನೆರವಾಗಲಿವೆ" ಎನ್ನುತ್ತಾರೆ.

ಪಾರ್ಕ್‌ ನಿರ್ಮಾಣಕ್ಕೆ ಮುಂದಾದ ಜಿಂದಾಲ್‌: 'ನಮ್ಮ ಘಟಕ ಬಳ್ಳಾರಿಯ 11 ಪಾರ್ಕ್‌ಗಳ ಅಭಿವೃದ್ಧಿ ಜವಾಬ್ದಾರಿ ಹೊಂದಿದೆ. ಪಾರ್ವತಿನಗರ ಪಾರ್ಕ್ ಅಭಿವೃದ್ಧಿಪಡಿಸಿದ್ದು ಅಪಾರ ಮೆಚ್ಚುಗೆ ಗಳಿಸಿದೆ ಎಂದು ಜಿಂದಾಲ್ ನ ವಿನೋದ್ ನಾವಲ್ ಹೇಳುತ್ತಾರೆ. ಗಣೇಶ್ ಕಾಲೋನಿ, ವೀರನಗೌಡ ಕಾಲೋನಿ, ನ್ಯೂ ವೀರನಗೌಡ ಕಾಲೋನಿ, ರೇಡಿಯೋ ಪಾರ್ಕ್, ಗಣೇಶ್ ನಗರ ಪಾರ್ಕ್‌ಗಳ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.

ಕುವೆಂಪು ನಗರಗದ ಡಾ. ವಿಷ್ಣುವರ್ಧನ್ ಪಾರ್ಕ್ ಉದ್ಘಾಟನೆಗೆ ಸಿದ್ಧವಾಗಿದೆ. 3.4 ಕೋಟಿ ರುಪಾಯಿ ವೆಚ್ಚದಲ್ಲಿ 7 ಪಾರ್ಕ್‌ಗಳು ಸಿದ್ಧವಾಗುತ್ತಿವೆ. ನೇತಾಜಿನಗರ, ಗೋಲ್ಡ್ ಸ್ಮಿತ್ ಕಾಲೋನಿ, ಜಯನಗರ, ಕೋಟೆ ಬಳಿಯ ಪಾರ್ಕ್‌ಗಳು 1.6 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿವೆ. ಒಟ್ಟು 29 ಪಾರ್ಕುಗಳನ್ನು ಹಂತಹಂತವಾಗಿ ನಿರ್ಮಿಸಲಾಗುತ್ತಿದೆ. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಕಂಪನಿಯ ಬದ್ಧತೆ ಇದಾಗಿದೆ" ಎನ್ನುತ್ತಾರೆ.

ಜನವರಿ 22ರ ಶನಿವಾರ ಸಂಜೆ 5 ಗಂಟೆಗೆ ನಡೆಯುವ ಡಾ. ವಿಷ್ಣುವರ್ಧನ್ ಪಾರ್ಕ್ ಮತ್ತು ಪುತ್ಥಳಿಯನ್ನು ಜನರಿಗೆ ಅರ್ಪಿಸಲಿಕ್ಕಾಗಿ ಭಾರತಿ ವಿಷ್ಣುವರ್ಧನ್, ಚಿತ್ರನಟ ಅನಿರುದ್ಧ್, ಸಚಿವರಾದ ಜಿ. ಜನಾರ್ದನರೆಡ್ಡಿ, ಬಿ. ಶ್ರೀರಾಮುಲು, ಜಿಂದಾಲ್‌ನ ಹಿರಿಯ ಉದ್ಯೋಗಿಗಳು ಆಗಮಿಸಲಿದ್ದಾರೆ. ಶಿವರಾಜಕುಮಾರ್ ಭೇಟಿ ನಂತರ ಸ್ಥಳೀಯ ಕನ್ನಡಿಗರಿಗೆ ವಿಷ್ಣು ಕುಟುಂಬದವರ ಭೇಟಿ ಹೆಮ್ಮೆಯ ವಿಷಯ ಆಗಿದೆ. [ಬಳ್ಳಾರಿ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+