ಭ್ರಷ್ಟಾಚಾರದ ವಿರುದ್ಧ ಹೋರಾಡಿ : ಲೋಕಾಯುಕ್ತ
ರೋಟರಿ ಬೆಂಗಳೂರು ಬನಶಂಕರಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರೋಟರಿ ಸಾಧಕ ಪ್ರಶಸ್ತಿ ಸ್ವೀಕರಿಸಿದ ಅವರು ರಾಷ್ಟ್ರಪತಿ, ಪ್ರಧಾನಮಂತ್ರಿ, ರಾಜ್ಯಪಾಲ ಹೀಗೆ ಪ್ರತಿಯೊಬ್ಬರೂ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಇಷ್ಟಾದರೂ ಭ್ರಷ್ಟರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಪ್ರಧಾನಿ ಮನಮೋಹನ್ ಸಿಂಗ್ ಭ್ರಷ್ಟಾಚಾರ ನಿಗ್ರಹಕ್ಕಾಗಿ ವಿಶೇಷ ಕಾಯ್ದೆ ಜಾರಿಗೆ ತರುವುದಾಗಿ ಹೇಳಿದ್ದಾರೆ. ಆದರೆ, 2008 ಡಿಸೆಂಬರ್ ನಲ್ಲಿ ಸಂಸತ್ ನಲ್ಲಿ ಅವರದೇ ಉಪಸ್ಥಿತಿಯಲ್ಲಿ 12 ನಿಮಿಷಗಳಲ್ಲಿ 17 ಮಸೂದೆಗಳು ಅಂಗೀಕಾರಗೊಂಡವು. ಅದರಲ್ಲಿ ಭ್ರಷ್ಟಾಚಾರ ಕಾಯ್ದೆಯನ್ನು ಬಲಹೀನ ಮಾಡುವ ತಿದ್ದುಪಡಿಯೂ ಸೇರಿದ್ದು ವಿಷಾದಕರ ಎಂದು ಹೆಗ್ಡೆ ಹೇಳಿದರು.
ಲೋಕಾಯುಕ್ತ ಹುದ್ದೆಯಲ್ಲಿ ಕುಳಿತು ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆ ಮಾಡಿದ್ದೇನೆ ಎಂದು ಹೇಳಲಾಗದು. ತಕ್ಕ ಮಟ್ಟಿಗೆ ನನಗೆ ಕೊಟ್ಟಿರುವ ಇತಿಮಿತಿ ಅಧಿಕಾರದಲ್ಲಿ ಕ್ರಮ ಕೈಗೊಂಡಿದ್ದೇನೆ. ಸಂತೋಷ ಹೆಗ್ಡೆ ನಂತರ ಯಾರು ಎಂದು ಬಹಳ ಮಂದಿ ಕೇಳುತ್ತಾರೆ, ಕರ್ನಾಟಕದಲ್ಲಿ ಬಹಳಷ್ಟು ಮಂದಿ ಸಮರ್ಥರಿದ್ದಾರೆ. ಈ ಹುದ್ದೆಯಲ್ಲಿರುವವರಿಗೆ ಬದ್ಧತೆ ಮುಖ್ಯ ಎಂದು ಹೆಗ್ಡೆ ಅಭಿಪ್ರಾಯಪಟ್ಟರು.