ಸೋನಿಯಾ ಟೀಕೆಗೆ ಯಡಿಯೂರಪ್ಪ ಗರಂ
ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರು ಇತ್ತೀಚೆಗೆ ರಾಜ್ಯ ಸರಕಾರದ ಮೇಲೆ ದಾಳಿ ಆರಂಭಿಸಿದ್ದಾರೆ. ಕಾಂಗ್ರೆಸ್ ಸಂಸ್ಕೃತಿ ಏನೆಂಬುದು ಮೊದಲು ಅರಿತು ಮಾತನಾಡಲಿ. ಬಿಜೆಪಿ ಸರಕಾರದ ವಿರುದ್ಧ ಮಾತನಾಡುವ ನೈತಿಕತೆಯನ್ನು ಈ ಕಾಂಗ್ರೆಸ್ ನಾಯಕರು ಉಳಿಸಿಕೊಂಡಿದ್ದಾರೆಯೇ ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ನವದೆಹಲಿಯಲ್ಲಿ ಆರಂಭಗೊಂಡ ಎಐಸಿಸಿಯ 83ನೇ ಮಹಾಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಸೋನಿಯಾ, ಭ್ರಷ್ಟಾಚಾರ ಹಾಗೂ ದುರ್ನಡತೆಗೆ ಪಕ್ಷದಲ್ಲಿ ಎಳ್ಳಷ್ಟೂ ಸ್ಥಾನವಿಲ್ಲವೆಂದು ಘೋಷಿಸಿದ್ದರು. ಈ ಘೋರ ಪಿಡುಗನ್ನು ಪಕ್ಷ ಹಾಗೂ ಸರಕಾರವು ಕಿತ್ತೊಗೆಯಬೇಕೆಂದು ಕರೆ ನೀಡಿದ್ದರು. 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ಪ್ರಧಾನಿ ಮನಮೋಹನ್ಸಿಂಗ್ ರ ತೇಜೋವಧೆ ನಡೆಸುತ್ತಿರುವ ಬಿಜೆಪಿಯ ಮೇಲೂ ಅವರು ತೀವ್ರ ವಾಗ್ದಾಳಿ ನಡೆಸಿದ್ದರು.
ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭೂಹಗರಣದಲ್ಲಿ ಭಾಗಿಯಾಗಿದ್ದರೂ ಅವರ ವಿರುದ್ಧ ಬಿಜೆಪಿ ಯಾವ ಕ್ರಮಕೈಗೊಂಡಿದೆ. ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳದ ಬಿಜೆಪಿ 2 ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಸತ್ ಕಲಾಪಗಳನ್ನು ಸ್ಥಗಿತಗೊಳಿಸುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಭ್ರಷ್ಟಾಚಾರ ಹಾಗೂ ಕೋಮುವಾದದ ವಿರುದ್ಧ ವಾಗ್ದಾಳಿ ನಡೆಸಿದ್ದ ಸೋನಿಯಾಗಾಂಧಿ, ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಕೋಮುವಾದಗಳೆರಡೂ ಅಪಾಯಕಾರಿಯಾಗಿದ್ದು, ಅವನ್ನು ಪರಾಭವಗೊಳಿಸಬೇಕಾಗಿದೆಯೆಂದು ಪ್ರತಿಪಾದಿಸಿದ್ದಾರೆ.(ಯಡಿಯೂರಪ್ಪ)